Friday, June 6, 2025

ಮತ್ತೆ ಬರುವುದೇ?


ಈ ಲೇಖನ ಬರೆಯುವುದಿಲ್ಲ ಎಂದು ಹಲವು ಸಲ ಅಂದುಕೊಂಡರೂ, ಕೆಲವು ಅನಿಸಿಕೆಗಳನ್ನು ಹೇಳದೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ. 



ನನ್ನ ಪರಿಚಯಸ್ಥ ಮಹಿಳೆಯೊಬ್ಬರು ಇದ್ದಾರೆ. ಬೆಂಗಳೂರಿಗೆ ಬಂದು ಐದಾರು ವರ್ಷ ಕಳೆದಿರಬೇಕು. ವೃತ್ತಿಯಿಂದ ಅವರು ಬೆಂಗಳೂರಿಗರೇ ಆದರೂ ಅವರು ಮೂಲತಃ ಕೇರಳದ ಕಾಸರಗೋಡಿನವರು. ಅವರ ಎಲ್ಲಾ ವೈಯಕ್ತಿಕ ದಾಖಲೆಗಳೂ ಅಲ್ಲಿನ ವಿಳಾಸದಲ್ಲಿದೆ. ಬದಲಿಸಬಹುದಿತ್ತು. ಆದರೆ ಅವರೇ ಹೇಳುವಂತೆ ಎಲ್ಲಿಯಾದರೇನೂ ಭೂಮಿ ಮೇಲೆ ಉಸಿರಾಡುತ್ತಿದ್ದೇನಲ್ಲ, ಮಾತ್ರವಲ್ಲ ಕೇರಳವಾದರೇನು ಕರ್ನಾಟಕವಾದರೇನು ನಾನು ಭಾರತೀಯಳು ಅಷ್ಟು ಸಾಕು. ಈ ಅನಿಸಿಕೆಯನ್ನು ಪೂರ್ಣವಾಗಿ ಸರಿ ಎನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೂ ಅದರಲ್ಲಿ ಸತ್ಯಾಂಶ ಇಲ್ಲದೇ ಇರುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. 

ಅವರ ಆಧಾರ್ ಚುನಾವಣಾ ಗುರುತು ಎಲ್ಲವೂ ಕೇರಳದಲ್ಲಿರುವುದರಿಂದ ಅವರಿಗೆ ಯಾವುದೇ ಉಚಿತ ಸೌಲಭ್ಯ ಇರುವುದಿಲ್ಲ. ಅವರಂತೆ ಕರ್ನಾಟಕದಲ್ಲಿ ಹಲವರಿದ್ದಾರೆ. ಈ ಒಂದು ಕಾರಣಕ್ಕೆ ತೀರ ಅನಿವಾರ್ಯ ಎನಿಸುವ ಸೌಲಭ್ಯ ಸಿಗದೇ ಇರುವವರು... ಈ ನಿಯಮ ವೆತ್ಯಾಸ  ತಾರತಮ್ಯ ಅದೇನು ಈಗಿನ ಸಮಸ್ಯೆಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಅದು ಒಂದಲ್ಲ ಒಂದು ವಿಧದಲ್ಲಿ ನಮ್ಮ ನಡುವೆ ಇದೆ.  ಅದು ಸರಿಯೋ ತಪ್ಪೋ ಬೇರೆ ವಿಚಾರ. ಆದರೆ ಒಂದು ಸೌಲಭ್ಯ ಅದು ಮೀಸಲಾತಿಯಾಗಲಿ ಇನ್ನಿತರವೇ ಆಗಲಿ  ಧರ್ಮ ಭಾಷೆಯನ್ನು ಹೊಂದಿಕೊಂಡು ನಮಗೆ ಲಭ್ಯವಾಗುವುದಾದರೆ ಅದನ್ನು ಉಪಯೋಗಿಸುವಲ್ಲೂ ಒಂದು ಕೀಳರಿಮೆ ಹಲವರಿಗೆ ಬಾಧಿಸುತ್ತದೆ. ಅದಕ್ಕೆ ಕಾರಣ ಅವ್ಯಕ್ತವಾದ ಒಂದು ಆತ್ಮ ಗೌರವ. ಸೌಲಭ್ಯವನ್ನು ಅನುಭವಿಸುವಲ್ಲಿ...ಈ  ಅರ್ಹತೆಯೂ ಇಲ್ಲದವರು ಇದ್ದಾರಲ್ಲಾ ಎಂದು ತಿಳಿವಾಗ...ಹೊಟ್ಟೆ ತುಂಬಿದವನಿಗೆ ಆಹಾರ ತಂದಿಟ್ಟರೆ ಆಗುವ ಸಂಕಟ ..ಛೇ ಹೊರಗೆ ಹಸಿವಿನಿಂದ ಬಳಲುವವರ ಮುಖ ಸ್ಮರಣೆಗೆ ಬರುತ್ತಿದ್ದರೆ ಅದೇ ಆತ್ಮ ಗೌರವ. ನನಗೆಷ್ಟು ಅರ್ಹತೆ ಇದೆಯೋ ಅದು ಬೇರೆ ಆದರೆ ಈ ಅರ್ಹತೆ ಇಲ್ಲದೇ ಸೌಲಭ್ಯದ ಅನಿವಾರ್ಯತೆ ಇರುವವರು ಹಲವರಿದ್ದಾರೆ, ಅವರ ಹಸಿವಿನ ಮೇಲೆ ನನ್ನ ಅರ್ಹತೆ ಕೇಕೆ ಹಾಕುತ್ತದೆ ಎಂದು ಅನ್ನಿಸಿಬಿಡುತ್ತದೆ. ಹೊರಗೆ ದುಡಿಯುವುದಕ್ಕೆ ಹೋದ ಅಮ್ಮ ಮನೆಯಲ್ಲಿದ್ದ ಮಕ್ಕಳ ಹಸಿವನ್ನು ನೆನೆದು ಹೋದಕಡೆ ಆಹಾರ ಸಿಕ್ಕಿದರೂ ಹಸಿವಿನಿಂದ ಇರುವಂತೆ  ಆ ಭಾವನೆ ಅನುಭವದಲ್ಲಿ ಮಾತ್ರ ಅರ್ಥವಾಗಬಲ್ಲುದು. 

ಹೀಗೆ ಒಂದು ಸೌಲಭ್ಯ ಅವಕಾಶ ಒಂದು ಭಾಷೆಗೆ ರಾಜ್ಯಕ್ಕೆ ಸೀಮಿತವಾಗಿ ಮೀಸಲಾಗುವಾಗ, ಮೊನ್ನೆ ಮೊನ್ನೆ  ನಡೆದ, ದೊಡ್ಡ ದುರಂತಕ್ಕೆ ಕಾರಣವಾದ ವಿಜಯೋತ್ಸವದ ವಿಡಂಬನೆ ಕಣ್ಣೆದುರು ಬರುತ್ತದೆ. ಯೋಚಿಸಿ...ಸರಕಾರ ಕರೆದು ಸನ್ಮಾನಿಸಿದವರಲ್ಲಿ ಕರ್ನಾಟಕದ ಆಧಾರ್ ಕಾರ್ಡು ಚುನಾವಣಾ ಚೀಟಿ ಇದ್ದವರೆಷ್ಟು ಮಂದಿ ಇದ್ದಾರೆ? ಕರ್ನಾಟಕ ಸರಕಾರಕ್ಕೆ ಮತ ಚಲಾಯಿಸುವವರು ಎಷ್ಟಿದ್ದಾರೆ? ಎಲ್ಲದರಲ್ಲೂ ಭಾಷೆ ಧರ್ಮವನ್ನು ನೋಡುವ ನಾವು ನಮಗೆ ಬೇಕಾದ ಕಡೆಗೆ ಇದು ಗಮನಾರ್ಹವೆನಿಸುವುದಿಲ್ಲ. ಆದರೆ ಸಾವು ಈ ಮೀಸಲಾತಿಯನ್ನು ಹುಡುಕಿಕೊಂಡು ಬರುವುದಿಲ್ಲ. ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡ ನಂತರ ಎಡವಿದ್ದು ಎಲ್ಲಿ ಎಂದು ಅರಿವಾಗದೇ ಇದ್ದರೆ ಈ ದುರಂತ ಪಾಠವಾಗುವುದಿಲ್ಲ. 

ಇಲ್ಲಿ ಅಪರಾಧಗಳು ತಪ್ಪುಗಳು ಹೋಲಿಕೆಯಲ್ಲಿ ತುಲನೆ ಮಾಡಿ ಸಮರ್ಥಿಸುವ ಹೀನ ಮನಸ್ಥಿತಿ ಇರುತ್ತದೆ. ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಬ್ಬರ ತಪ್ಪು ಗುರಾಣಿಯಾಗುತ್ತದೆ. ಯಾರೋ ದಾರಿಯ ಕಲ್ಲನ್ನು ನೋಡದೇ ಎಡವಿ ಬೀಳುತ್ತಾರೆ. ಆವರು ಬಿದ್ದಕಾರಣ ನಾವೂ ಉಳಿದವರೂ ಬೀಳಬಹುದು ಎನ್ನುವ ಸಮರ್ಥನೆ ಇದೆಯಲ್ಲ ಅದು ಮೂರ್ಖತನ. ಹನ್ನೊಂದು ಜನರು...ಕಾಲ ಕೆಳಗೆ ಮರಣವನ್ನು ಕಂಡರು. ಆಗ ಕುಂಭಮೇಳದ ನೂಕು ನುಗ್ಗಲಿನಲ್ಲಿ ಸತ್ತವರ ತುಲನೆಯನ್ನು ಮಾಡಿ ಸಮರ್ಥಿಸುವುದಕ್ಕೆ ತೊಡಗುತ್ತಾರೆ. ಕುಂಭಮೇಳದಲ್ಲಿ ಹಾಗಾಗಬಾರದಿತ್ತು. ಅದೂ ಅಜಾಗರೂಕತೆ. ಇಲ್ಲಿ ಒಂದನ್ನೊಂದು ಹೋಲಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ.  ಕುಂಭ ಮೇಳದಲ್ಲಿ ಆರಂಭದ ದಿನದಲ್ಲಿ ಆಗಿ ಹೋದ ದುರಂತ. ಆದರೆ ಆನಂತರ ಅದನ್ನು ಯಶಸ್ವಿಯಾಗಿ ಕೋಟಿ ಕೋಟಿ ಸಂಖ್ಯೆಯಲ್ಲಿ  ಜನ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ನಮ್ಮ ಮುಂದೆ ಇದೆ. ನಿಜಕ್ಕೂ ಕುಂಭಮೇಳದ ಘಟನೆ ಪಾಠವಾಗಬೇಕಿತ್ತು. ಆದರೆ ಅದಕ್ಕೆ ನಮ್ಮ ಅಹಂ ಬಿಡುವುದಿಲ್ಲ. ನಮ್ಮ ತಪ್ಪಿಗೆ ಕ್ಷುಲ್ಲಕ ಕಾರಣಗಳು ಸಿಗುತ್ತವೆ.  ಕುಂಭ ಮೇಳಕ್ಕೋ ಕಾಶಿಗೋ ಅಥವಾ ಶಬರಿಮಲೆ ಹತ್ತುವುದಕ್ಕೋ ಯಾರಾದರೂ ಹೋದರೆ ಅವರು ಮನೆಗೆ ಬರುತ್ತೇನೆ ಎಂದು ಹೇಳುವ ಹಾಗಿಲ್ಲ. ದೂರದ ಹಜ್ ಯಾತ್ರೆಗೆ ಹೋಗುವಾಗಲೂ ಮತ್ತೆ ಬರುವ ಆಶೆ ಇರಕೂಡದು.  ಅದು ಬದುಕಿನ ಚರಮ ಸ್ಥಾನ. ಒಂದು ವೇಳೆ ಸತ್ತರೂ ಸಾಯುಜ್ಯ ಪದವಿ ಸೇರುವ  ತೃಪ್ತಿ ಇರಬಹುದು. ಆದರೆ ಈ ಐಪಿಲ್ ವಿಜಯೋತ್ಸವ....ಸಾಯುಜ್ಯ ಪದವಿಯಾಗಬಹುದೇ? ಹೋಲಿಕೆ ಎಷ್ಟು ಮೂರ್ಖತನ ಅನ್ನಿಸುವುದಿಲ್ಲವೆ? ಪ್ರಾಣ ಭೀತಿ ಇಲ್ಲದೇ ಹೋಗುವವರನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಮೆಕ್ಕಾದಲ್ಲೋ ಶಬರಿಮಲೆಯಲ್ಲೋ ಕಾಶಿಯಲ್ಲೋ ಕಾಲ್ತುತುಳಿತವಾದರೆ ಅದರ ಅರ್ಥವೇ ಬೇರೆ. ಅದು ಸರಿ ಎಂಬ ವಾದವಲ್ಲ. ಆದರೆ ತುಲನೆಗೆ ಒಂದಿಷ್ಟು ಚಿಂತನೆ ಅತ್ಯವಶ್ಯ. 

ಮೊನ್ನೆ ಹನ್ನೊಂದು ಜನ ಅಸುನೀಗಿದರು. ಯೋಚಿಸಿ ಇದರಲ್ಲಿ ಎಲ್ಲರೂ ಜನ ಸಾಮಾನ್ಯರು. ಒಂದು ವೇಳೆ ಯಾರದರೂ ಒಬ್ಬ ಶಾಸಕನ ಮಂತ್ರಿಯ ಅಥವ ಒಬ್ಬ ಜನಪ್ರತಿನಿಧಿಯ ಮಕ್ಕಳೋ ಸಂಭಂದಿಕರೋ ಪ್ರಾಣ ಕಳೆದುಕೊಂಡರೆ ಹೇಗಿರುತ್ತಿತ್ತು. ಕಾಲವೇ ಹೀಗೆ, ಇಲ್ಲಿ ಜಲಪ್ರವಾಹದಲ್ಲಿ    ನೆರೆಬಂದರೆ, ನೀರು ನುಗ್ಗಿದರೆ ಅದು ಬಡವರ ಮನೆಯನ್ನಷ್ಟೇ ಗುರಿಯಾಗಿಸಿ ಅಪೋಶನ ತೆಗೆದುಕೊಳ್ಳುತ್ತದೆ. ಎಲ್ಲಿಯೂ ಶಾಸಕರ ಮಂತ್ರಿಯ ಮನೆ ಮುಳಿಗಿದ ನಿದರ್ಶನ ಸಿಗುವುದು ದುರ್ಲಭ. ಪ್ರಕೃತಿಯೂ ಒಂದು ವಿ ಐ ಪಿ ಸ್ಥಾನವನ್ನು ಮೀಸಲಾಗಿರಿಸುವುದು ವಿಚಿತ್ರ. ಮೊನ್ನೆ ವೇದಿಕೆಯಲ್ಲಿ ಸೇರಿದ ಕುಟುಂಬ ವರ್ಗದಲ್ಲಿರುವ ಒಬ್ಬಿಬ್ಬರನ್ನಾದರೂ ಕ್ರೀಡಾಂಗಣದ ಬಳಿಗೆ ಕಳುಹಿಸುವ ಧೈರ್ಯಯಾರಿಗಾದರೂ ಇತ್ತೇ ಎಂಬುದು ವಿಷಯ. ಯಾಕೆಂದರೆ ಇಲ್ಲಿ ಸೌಲಭ್ಯಗಳು ತುಳಿತಗಳು ವರ್ಗವನ್ನು ಅರಸಿಕೊಂಡು ಬರುತ್ತವೆ. 

ದುರಂತ ನಡೆದ ನಂತರ ಅಲ್ಲಿ ರಾಶಿಯಾದ ಚಪ್ಪಲಿಗಳನ್ನು ನೋಡಿ ಅನ್ನಿಸುತ್ತದೆ, ಇಲ್ಲಿ ಬರಿದಾದ ಪಾದಗಳೆಷ್ಟೋ ಬರಿದಾದ ಪ್ರಾಣಗಳೆಷ್ಟೋ....ಆದರೂ ಯಾವ ದುರಂತವೂ ನಮಗೆ ಪಾಠವನ್ನು ಕಲಿಸುವುದಿಲ್ಲ. ಇಲ್ಲವಾದರೆ ...ಆ ಜನಜಂಗುಳಿ ನೋಡಿ ಬುದ್ದಿ ಇದ್ದವರಿಗೆ ಅರ್ಥವಾದೀತು. ಆದರೆ ಇದನ್ನೆ ಕಾಶಿ ಶಬರಿ ಮಲೆ ಎಂದು ತಿಳಿದರೆ ಅದಕ್ಕೆ ಎನು ಹೇಳಬೇಕು?  ಮೊದಲಿಗೆ ನಮ್ಮ ಹಪ ಹಪಿಕೆಯನ್ನು ನಿಯಂತ್ರಿಸಬೇಕು. ಸುಖ ಎಂಬುದು ನಮ್ಮ ನಿಯಂತ್ರಣದ ಮನೋಭಾವದಲ್ಲಿ ಇದೆ ಎಂದು ತಿಳಿಯಬೇಕು. 

ಈಗ ಹಲವು ಸಮರ್ಥನೆಗಳು ಹಲವು ಕಾರಣಗಳು ಸುಲಭದಲ್ಲಿ ಸಿಗಬಹುದು. ಆದರೆ ಹೋದ ಪ್ರಾಣಗಳು ಬಿಟ್ಟು ಹೋದ ಕಥೆಗಳು ಪಾಠವಾಗುತ್ತದೆ. ಆಗಲೂ ಪಶ್ಚಾತ್ತಾಪ ಮೂಡದೇ ಇದ್ದರೆ ನಮ್ಮಲ್ಲಿ ಮಾನವೀಯತೆ ಇದೆ ಎಂದರೆ ಮೂರ್ಖತನವಾಗುತ್ತದೆ. ಈಗ ಸನ್ಮಾನಿಸಿದ ಕ್ರೀಡಾಳುಗಳನ್ನು ಕೇಳಿ. ಮತ್ತೊಮ್ಮೆ ಸನ್ಮಾನಿಸುತ್ತೇವೆ ಬನ್ನಿ ಎಂದರೆ...ಅವರು ಬರಬಹುದೇ? ಅವರ ತಪ್ಪು ಇರದೇ ಇರಬಹುದು. ಆದರೆ ಅವರಿಗೂ ಕಾಡಿ ಬಿಡುತ್ತದೆ..ಎಲ್ಲೋ ಒಂದು ಕಡೆ ಇದಕ್ಕೆ ನಾವೂ ಕಾರಣರಾಗಿಬಿಟ್ಟೆವು. ಈ ಪಾಪ ಪ್ರಜ್ಞೆ ಅವರನ್ನೂ ಕಾಡಬಹುದು. ಹೀಗಾಯಿತಲ್ಲಾ ಎಂದು ಮರುಗಬಹುದು. ಆದರೆ....ಆದರೆ ಮರುಗಲಾರದ ಪಶ್ಚಾತ್ತಾಪ ಪಡದ ಆತ್ಮಗಳು ಇನ್ನೂ ಇವೆ. ಅವುಗಳು ಈತಪ್ಪುಗಳನ್ನು ಸಮರ್ಥಿಸುತ್ತವೆ. ಹೋಲಿಕೆ ಮಾಡುತ್ತವೆ.....ಇಲ್ಲಿ ಒಂದೇ ಒಂದು ಬೇಡಿಕೆ...ಯಾವ ಪರಿಹಾರವೂ ಬೇಡ ಯಾವ ಸನ್ಮಾನವೂ ಬೇಡ...ಆ ಹನ್ನೊಂದು ಮಂದಿಯ ಪ್ರಾಣವನ್ನು ಪುನಃ ತಂದು ಬಿಡಿ. ಅದು ಸಾಧ್ಯವಾಗಬಹುದೇ? ಆ ಪ್ರಾಣ ಮತ್ತೆ ಬರುವುದೇ?



Saturday, May 31, 2025

ಕ್ಷಮೆಯೊಂದೇ ಸಾಕೆ

ಕೆಲವು ವರ್ಷಗಳ ಹಿಂದೆ ನನ್ನ ಮಿತ್ರರೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತದೆ. ಕನ್ನಡ ಭಾಷೆ ಉಳಿಯಬೇಕಾದರೆ ಬೇರೆ ಭಾಷೆ ಉಳಿಯಬೇಕು. ಅದರಲ್ಲೂ ಅಂಗ್ಲ ಭಾಷೆ ಉಳಿದರೆ ಈಗಿನ  ಕನ್ನಡ ಜೀವಂತವಾಗಿರುತ್ತದೆ. ಬಹಳ ಮಾರ್ಮಿಕ ಪದ. ಕನ್ನಡ ಬಹಳ ಸ್ವಂತಿಕೆ ಇರುವ ಭಾಷೆ. ಅದರದ್ದೇ ಆದ ಶಬ್ದ ವ್ಯಾಕರಣ ಅದರ ಸೌಂದರ್ಯವನ್ನು ಹೆಚ್ಚಿಸಿವೆ. ಹಾಗಿದ್ದರೂ ಅವರು ಹಾಗೆ ಹೇಳಿದಕಾರಣ ಒಂದೇ ಈಗಿನ ಕನ್ನಡ ಭಾಷೆ ಹೆಚ್ಚು ಬೇರೆ ಭಾಷೆಯನ್ನು ಅವಲಂಬಿಸಿದೆ ಅಂತ ಅರ್ಥ. ಇದರಲ್ಲಿ ಅತಿಶಯ ಏನೂ ಕಾಣುವುದಿಲ್ಲ. ಕನ್ನಡದ ಅಭಿಮಾನಕ್ಕಿಂತಲೂ ಆಂಗ್ಲ ವ್ಯಾಮೋಹ ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗೆ ವೆತ್ಯಾಸವೇ ಇರುವುದಿಲ್ಲ. 

ಯಾವುದೋ ವಿಳಾಸ ಹುಡಿಕೊಂಡು ಹೋದರೆ ದಾರಿಯಲ್ಲಿ ತೀರ ಅನಕ್ಷರಸ್ಥನಲ್ಲಿ ಕೇಳೀದರೂ...ಸ್ಟ್ರೈಟ್ ಹೋಗಿ, ಲೆಫ಼್ಟ್ ಕಟ್ ಮಾಡಿ ರೈಟ್ ಟರ್ನ್ ಮಾಡಿ ಅಲ್ಲೇ ಡೆಡ್ ಎಂಡ್ ನಲ್ಲಿ ಇದೆ. ವಿಳಾಸ ಹುಡುಕುವ ಮೊದಲು ಇಲ್ಲಿ ಕನ್ನಡ ಎಲ್ಲಿದೆ ಎಂದು ಹುಡುಕುವ ಅನಿವಾರ್ಯತೆ ಪರ ಊರಿನವರಿಗೆ ಬಂದರೆ ಆಶ್ಚರ್ಯವಿಲ್ಲ.  ಇಲ್ಲಿಯ ಅಂಗಡಿ ಇನ್ನಿತರ ಸಂಸ್ಥೆಗಳ ಹೆಸರು  ಆಂಗ್ಲ ಪ್ರೇಮದ ಅರಿವಾಗುತ್ತದೆ.  ಕೇಕ್ ಚಾಯ್ಸ್, ಬುಸಿನೆಸ್ ಪಾಯಿಂಟ್, ಜೂಸ್ ಜಾಯಿಂಟ್ ಫುಡ್ ಕಾರ್ನರ್...ಬೈಕ್ ಪಾಯಿಂಟ್ ಹೀಗೆ ಹೆಸರುಗಳಲ್ಲಿ ಎಲ್ಲೂ ಕನ್ನಡ ನುಸುಳದಂತಹ ಪರಭಾಷಾ ಪ್ರೇಮ ಅದರಲ್ಲೂ ಇಂಗ್ಲೀಷ್ ಪ್ರೇಮ ಗಾಢವಾಗಿದೆ. 

ದಿನ ಬೆಳಾಗಾದರೆ ಕನ್ನಡ ಪರ ಹೋರಾಟ ಕಾಣಬಹುದು. ಪ್ರತಿಯೊಂದು ವಿಷಯದಲ್ಲೂ ಕನ್ನಡ ಪರ ಕಾಳಜಿಗೆ ಹೋರಾಟದ ಮನಸ್ಥಿತಿ ಗೋಚರವಾಗುತ್ತದೆ. ಹೋರಾಟ ಅತ್ಯವಶ್ಯ. ಒಬ್ಬ ಯಾವುದೋ ಒಂದು ಊರಿಗೆ ಹೋಗಿ ವ್ಯಾಪಾರ ವ್ಯವಹಾರ ಮಾಡಬೇಕಾದರೆ ಮೊದಲು ಅಲ್ಲಿನ ಭಾಷೆಯನ್ನು ಅರಿಯಬೇಕು. ಯಾಕೆಂದರೆ ಒಂದು ವ್ಯಾಪಾರದ ಹಿತದೃಷ್ಟಿ. ಇನ್ನೊಂದು ಅವನು ಯಾವುದೋ ತಿಳಿಯದ ಭಾಷೆಯಲ್ಲಿ ಮಾತಾನಾಡುತ್ತಾನೆ ಎಂದರೆ ಆತನ  ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡುತ್ತದೆ. ತಿಳಿಯದ ಬಾಷೆಯಲ್ಲಿ ಏನೋ ಹೇಳಿ ವಂಚಿಸುವುದಕ್ಕೆ ಅವಕಾಶ ಇರುತ್ತದೆ. ಪರವೂರಿಗೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆ ತಿಳಿಯದೇ ಇದ್ದರೂ ಆ ಭಾಷೆಗೆ ಗೌರವ ಕೊಡಬೇಕು. ಆಗ ನಮ್ಮ ಸ್ವಂತ ಭಾಷೆಗೆ ಸಹಜವಾಗಿ ಗೌರವ ಪ್ರಾಪ್ತಿಯಾಗುತ್ತದೆ. 

ನಾವು ಕೆಲವರು ಒಟ್ಟು ಸೇರುವಾಗ ಕೆಲವು ಗಹನವಾದ ರಹಸ್ಯ ವಿಷಯ ಹೇಳುವುದಕ್ಕೆ ಇದ್ದರೆ, ಆವರೆಗೆ ಎಲ್ಲರೂ ಕನ್ನಡ ಮಾತನಾಡುತ್ತಿದ್ದರೆ, ಉಳಿದವರಿಗೆ ತಿಳಿಯದಂತೆ ನಮ್ಮ ಮನೆ ಭಾಷೆಯಲ್ಲಿ ಒಂದೆರಡು ವಾಕ್ಯವಾದರೂ ಉದುರಿಸಿ ಬಿಡುತ್ತೇವೆ. ಎಲ್ಲರೂ  ಒಟ್ಟು ಸೇರಿದರೆ ಕೆಲವು ಸಂಗತಿಗಳು ಬಂದಾಗ... ಪಕ್ಕನೆ ಉಳಿದವರಿಗೆ ತಿಳಿಯ ಭಾಷೆಗೆ  ಜಾರಿ ನಮಗೆ ಹೇಳಬೇಕಾದ ರಹಸ್ಯ ಸಂದೇಶವನ್ನು ಮುಟ್ಟಿಸಿ ಬಿಡುತ್ತೇವೆ. ಯಾಕೆಂದರೆ ನಾವು ಹೇಳುವ ವಿಷಯ ಗಹನವಾಗಿದೆ ಮತ್ತು ಅಲ್ಲಿ ಉಳಿದವರಿಗೆ ಅರ್ಥವಾಗಬಾರದು ಎಂಬ ಕಾಳಜಿ ಇರುತ್ತದೆ. ಇದೊಂದು ರೀತಿಯ ಬುದ್ದಿವಂತಿಗೆ ಎಲ್ಲಾ ಭಾಷೆ ಜನಾಂಗದಲ್ಲೂ ಇದೆ. 

ಜಾಗತಿಕವಾಗಿ ಅಂಗ್ಲ ಭಾಷೆಯ ಅವಶ್ಯಕತೆ ಇರಬಹುದು. ಆದರೆ ನಮ್ಮ ಬಾಷೆ ಇರುವಲ್ಲಿ ಬೇರೆ ಭಾಷೆಯ ಪಯಣದ ಅಗತ್ಯ ಇರುವುದಿಲ್ಲ. ಭಾಷೆ ಯಾವುದಾದರೂ ಅದು ಜೀವಂತವಾಗಿ ಅಥವಾ ಅದರ ವ್ಯಾಪ್ತಿ ಬೆಳೆಯುವುದು ಸೌಹಾರ್ದ ವಾತಾವರಣದಲ್ಲಿ.  ಅದರ ಉಪಯೋಗದ ವ್ಯಾಪ್ತಿ ವಿಸ್ತಾರವಾದ ಹಾಗೇ ಭಾಷೆ ಬೆಳೆಯುತ್ತದೆ.   ಒಂದು ಭಾಷೆ ಸ್ವತಃ  ತಾನು ಬೆಳೆದುಕೊಂಡು ಇನ್ನೊಂದು ಭಾಷೆಯನ್ನು ಬೆಳೆಸಬೇಕು. 

ಮೊನ್ನೆ ಮೊನ್ನೆ ಐ ಪಿ ಎಲ್ ಕ್ರಿಕೆಟ್ ಪಂದ್ಯ  ಬೆಂಗಳೂರಲ್ಲಿ ನಡೆಯಿತು. ಇದರ ವೈಶಿಷ್ಟ್ಯವೆಂದರೆ ಇದು ಭಾರತ ಪಾಕಿಸ್ಥಾನದ ನಡುವಿನ ಪಂದ್ಯದ ಕಿಚ್ಚಿನಂತೆ ಬಿಸಿಯನ್ನು ಹತ್ತಿಸಿಕೊಂಡಿತ್ತು. ಆರ್ ಸಿ ಬಿ ಮತ್ತು ಸಿ ಎಸ್ ಕೆ ನಡುವಿನ ಪಂದ್ಯ. ಪಂದ್ಯದಲ್ಲಿ ಆರ್ ಸಿ ಬಿ ಗೆದ್ದಿತು. ಪಂದ್ಯದ ನಂತರ ಸಿ ಎಸ್ ಕೆ ತಂಡದ ಧೋನಿ ಮುಂತಾದವರ ಮನೆಯವರ ಮೇಲೆ ಗೇಲಿ ಮಾಡಿ ಕೇಕೆ ಹಾಕಿ ಸಂಭ್ರಮಿಸಲಾಯಿತು. ಗೆಲುವಿನ ಸಂಭ್ರಮವೇನೋ ಪ್ರತಿಯೊಂದು ಪಂದ್ಯದ ಕೊನೆಯ ಭಾಗದಲ್ಲಿ ಇದ್ದೇ ಇರುತ್ತದೆ. ಆದರೆ ಇಲ್ಲಿ ಕೇವಲ ಸಂಭ್ರಮವಲ್ಲ ಚೆನ್ನೈ ತಂಡದವರ ಮೇಲೆ ಗೇಲಿ ಮಾಡಿ ನಿಂದಿಸುವಂತೆ ವರ್ತಿಸುವುದು ನಿಜಕ್ಕೂ ಖೇದನೀಯ. ಹೀಗೆ ನಿಂದಿಸುವಾಗ ಇದೇ ಧೋನಿ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಎಂಬುದನ್ನೂ ಮರೆತರು. ಇದೇ ದೋನಿಯ ಬಗ್ಗೆ ದೇಶಾದ್ಯಂತ ಸಂಭ್ರಮಿಸಿದ್ದನ್ನು ಕೇವಲ ಭಾಷೆಯ ವೆತ್ಯಾಸದಲ್ಲಿ ಗೇಲಿ ಮಾಡಿ ಸಂಭ್ರಮಿಸುವ ಮನೋಭಾವ ಇದೆಯಲ್ಲ ಅದು ಯಾವ ಭಾಷಿಕರಿಗೂ ಶೋಭೆ ತರುವುದಿಲ್ಲ. ನಮ್ಮ ಭಾರತದ ಒಳಗೇ ಈ ಬಗೆಯ ಮನೋಭಾವ ಇದ್ದರೆ ದೂರದ ಪಾಕಿಸ್ಥಾನವನ್ನು ಹೇಳುವ ಹಕ್ಕು ನಮ್ಮಲ್ಲಿ ಉಳಿದಿರಬಹುದೇ ಎಂದು ಅನುಮಾನ ಬರುತ್ತದೆ. ಭಾಷೆ ದ್ವೇಷಕ್ಕೆ ಕಾರಣವಾಗುವಾಗ ನಾವು ಪ್ರಾಣಿಗಳಂತೆ ಮೂಕರಾಗಿ ಹುಟ್ಟಬೇಕಿತ್ತು ಎಂದನಿಸುತ್ತದೆ. ಮೂಗನಿಗೆ ಯಾವ ಭಾಷೆ? 

ನಮಗೆ ನಮ್ಮ ಕನ್ನಡ ದೊಡ್ಡದು. ಅದು ಗೌರವಯುತವಾಗಿ ಇರಬೇಕು. ಅದು ನೆಲಜಲದ ಸಂಸ್ಕೃತಿ. ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ನದಿಯ ನೀರಿನಂತೆ ಎಲ್ಲವನ್ನು ಕರಗಿಸಿ ಒಂದಾಗಿಬಿಡುವ ಸಂಸ್ಕಾರ ಕನ್ನಡಿಗರಿಗೆ ಜನ್ಮದಿಂದ ಬರುತ್ತದೆ. ಆದರೆ ದ್ವೇಷ ಎಂಬುದು ಇವುಗಳನ್ನು ನಾಶ ಮಾಡಿಬಿಡುತ್ತದೆ. ಭಾಷೆಯ ಬಗ್ಗೆ ಅಭಿಮಾನ ಬೇಕು. ಅದು ಬಹಳ ಪರಿಶುದ್ಧವಾಗಿರಬೇಕು. ಹೇಗೆ ಭಗವಂತನ ಮೇಲಿನ ಪ್ರೀತಿ ಪವಿತ್ರವಾಗಿರಬೇಕೆಂದು ಬಯಸುತ್ತೇವೋ ಅದೇ ರೀತಿ ನಮ್ಮ ಅಭಿಮಾನವೂ ಪವಿತ್ರವಾಗಿರಬೇಕು. ಅಲ್ಲಿ ದ್ವೇಷ ಅಸೂಯೆಗೆ ಅವಕಾಶ ಇರಬಾರದು. ಭಾಷೆಯ ಬಗ್ಗೆ ಅಭಿಮಾನ ಎಂದರೆ, ಅದು ಕೇವಲ ಕನ್ನಡ ಸಿನಿಮ, ಕನ್ನಡ ನಟರು ಹೀಗೆ ಅವರಿಗೆ ಮಾತ್ರ ಸೀಮಿತವಾಗಿಬಿಡುತ್ತದೆ. ಸಿನಿಮಾವನ್ನು ಬಿಟ್ಟು ಕನ್ನಡದ ಬಗ್ಗೆ ಯೋಚಿಸಬೇಕು. ಸಿನಿಮಾ ಎಂಬುದು ಅತ್ಯಂತ ಪ್ರಭಾವೀ ಕ್ಷೇತ್ರವಾದರೂ ಅದನ್ನುಳಿದು ಕನ್ನಡದ ಶ್ರೇಷ್ಠತೆಯನ್ನು ಸಾರುವ ಹಲವು  ಪ್ರಾಕಾರಗಳಿವೆ. ಜಗತ್ಪ್ರಸಿದ್ದ ವಿದ್ವಾಂಸರು ಸಾಹಿತಿಗಳು ಇವರ ಚರಿತ್ರೆಗಳಿವೆ. ಆದರೆ ಅದರ ಬಗ್ಗೆ ಕಾಳಜಿ ಇಲ್ಲ.ಕೇವಲ ಸಿನಿಮಾದ ಬಗೆಗಿನ ಅಂಧಾಭಿಮಾನ ಇವತ್ತು ಹಲವು ರೀತಿಯಲ್ಲಿ ದ್ವೇಷಕ್ಕೆ ಕಾರಣವಾಗುತ್ತದೆ. ಇನ್ನು ಸಾಹಿತ್ಯ ಸಾಹಿತಿಗಳು ಕೂಡ ಧರ್ಮಾಧರಿತವಾಗಿ ಮನ್ನಣೆ ಗಳಿಸುವ ಹಂತಕ್ಕೂ ಹೋಗಿಬಿಡುತ್ತವೆ. ಇದೆಲ್ಲ ಪರಸ್ಪರ ಸ್ಪರ್ಧೆಗೆ ಕಾರಣವಾಗಿ ಹತಾಶೆ ನೋವಿಗೂ ಕಾರಣವಾಗಿ ದ್ವೇಷದ ರೂಪ ತಳೆಯುತ್ತದೆ. ಭಾಷೆ ಉಳಿಯಬೇಕಾದರೆ ಸಾಹಿತ್ಯವೋ ಸಿನಿಮಾವೋ ಅಥವಾ ಇನ್ನಾವುದೋ ಕಲೆಯೋ ಇದರಿಂದ ಮಾತ್ರ ಉಳಿಯುವುದಲ್ಲ, ಅದನ್ನು ಪರಿಶುದ್ದವಾಗಿ ಮಾತನಾಡಿ ಪರಸ್ಪರ ಸಂವಹನದಿಂದ ಉಳಿಯಬೇಕು. ಇಂದು ಬೆಂಗಳೂರಲ್ಲಿ ಪರಿಶುದ್ದವಾಗಿ ಕನ್ನಡ ಮಾತನಾಡಬಲ್ಲವರು ಎಷ್ಟು ಮಂದಿ? ಇನ್ನು ಸಿನಿಮಾದವರು...ಕನ್ನಡ ಹೊರತಾಗಿ ಅವರ ಮಾತುಗಳು ಇಂಗ್ಲೀಷಲ್ಲೇ ಇರುತ್ತವೆ. ಇಂಗ್ಲೀಷ್ ಮಾಧ್ಯಮದಲ್ಲೆ ಕಲಿತು ಹೆಸರು ಹಣಕ್ಕೆ ಸಿನಿಮಾವನ್ನು ಅಂಗೀಕರಿಸಿದವರಿಂದ ಭಾಷೆಗೆ ಸುಂದರ ಅಸ್ತಿತ್ವ ಬರುವುದಕ್ಕೆ ಸಾಧ್ಯವೆ? 

ಭಾಷೆಗೆ ಸಂಬಂಧಿಸಿ ಪ್ರತಿ ದಿನ ಒಂದಲ್ಲ ಒಂದು ವಿವಾದ ಹುಟ್ಟಿಕೊಳ್ಳುತ್ತದೆ. ಯಾರೋ ಕನ್ನಡವನ್ನು ಅವಮಾನಿಸಿದರು ಅಂತ ಇಲ್ಲಿ ಹೋರಾಟ ಶುರು ಹಚ್ಚಿಕೊಳ್ಳುತ್ತದೆ. ಹೋರಾಟವೇನೋ ಇರಬೇಕು. ಆದರೆ ಆ ಹೋರಾಟ ಮತ್ತೊಂದು ಬಗೆಯಲ್ಲಿ ದ್ವೇಷವನ್ನು ಹುಟ್ಟಿಸುತ್ತದೆ. ಅವಮಾನ ಮಾಡಿದವರು ಮತ್ತೆ ಕ್ಷಮೆ ಕೇಳಬಹುದು. ಆಗ ನಾವು ಗೆದ್ದೆವು ಅಂತ ತಿಳಿಯಬಹುದು. ಆದರೆ ಅಲ್ಲಿ ಸೋತು ಕ್ಷಮೆ ಕೇಳಿದವರು ಮನಸ್ಸಿನ ಒಳಗೆ ರೋಷಾಗ್ನಿಯನ್ನು ಹತ್ತಿಸಿಕೊಳ್ಳೂತ್ತಾರೆ. ತಮಗಾದ ಅವಮಾನಕ್ಕೆ ಯಾವುದೇ ಬಗೆಯಲ್ಲಾದರೂ ಪ್ರತಿಕಾರಕ್ಕೆ ಕಾದು ಕುಳಿತುಬಿಡುತ್ತಾರೆ. ಯಾರೋ ಒಬ್ಬ ಅವಮಾನಿಸಿದ...ಆತ ಕೇವಲ  ಒಂದು ಕ್ಷಮೆಯನ್ನು ಕೇಳಿದರೆ ಸಾಕೆ? ಅದು ತೋರಿಕೆಗೆ ಎಂದಾದರೆ ಆ ಕ್ಷಮೆಯಿಂದ ಯಾವ ತೃಪ್ತಿ ಸಮಾಧಾನ ಸಿಗಬಹುದು? ನಮ್ಮ ಬುಡಕ್ಕೆ ನಾವು ಬೆಂಕಿ ಕೊಳ್ಳಿ ಇರಿಸಿ ನಾವು ನೆಮ್ಮದಿಯಿಂದ ನಮ್ಮ ಭಾಷೆ ಉಳಿಯಿತು ಎಂದು ಇರುವುದಕ್ಕೆ ಸಾಧ್ಯವಿದೆಯೇ? ಹಾಗಾಗಿ ಇಲ್ಲಿ ಕೇವಲ ಕ್ಷಮೆಯೊಂದು ಸಾಲದು. ಅದು ಮನಸ್ಸಿನಿಂದ ಬರಬೇಕು. ಆ ಮನಸ್ಸು ನಮ್ಮ ವರ್ತನೆಯಿಂದ ಪ್ರಚೋದಿಸಲ್ಪಡುತ್ತದೆ ಎಂಬುದು ಸತ್ಯ. ಈ ಸತ್ಯವನ್ನು ಅರಿಯುವಲ್ಲಿ ನಮ್ಮ ಕನ್ನಡ ಉಳಿವಿದೆ. 


Sunday, May 25, 2025

ಭೂಸುಧಾರಣೆ ಎಂಬ ಸತ್ಯ



ಭೂಸುಧಾರಣೆ ಕಾಯ್ದೆ ಎಪ್ಪತ್ತರ ದಶಕದಲ್ಲಿ ಜಾರಿಯಾಯಿತು. ಭಾರತದ ಸ್ವಾತಂತ್ರ್ಯಾನಂತರ ಬಂದ ಒಂದು ಕ್ರಾಂತಿಕಾರಿ ಕಾನೂನು. ದೇಶದಲ್ಲಿ ಕ್ರಾಂತಿ ತಂದಂತೆ ನಮ್ಮ ಸಂಸಾರದಲ್ಲೂ ಈ ಕಾನೂನು ಒಂದು ವಿಧದ ಕ್ರಾಂತಿಯನ್ನು ತಂದಿತ್ತು. ವಿಪರ್ಯಾಸವೆಂದರೆ ಈ ಕಾನೂನಿಂದಾಗಿ ಹಲವು ಬ್ರಾಹ್ಮಣರು ಸ್ವಂತ ನೆಲವನ್ನು ಕಳೆದು ಕೊಂಡರೆ ಇಲ್ಲಿ ನಮಗೆ ಸಿಗಬೇಕಾದ ಭೂಮಿಗೂ ಒಂದು ಹೋರಾಟ, ಅದೂ ಸಹ ಮೂರು ದಶಕಗಳ ಕಾಲ ನಡೆಯಿತು. ಆದರೂ ಪರಿಪೂರ್ಣ ನ್ಯಾಯ ಸಿಗಲೇ ಇಲ್ಲ. ಕಾನೂನು ಮಾಡಿದ ಇಂದಿರಾಗಾಂಧಿ ಭಕ್ತರೇ ಅದಕ್ಕೆ ವಿರುದ್ದವಾದದ್ದು ಮಾತ್ರವಲ್ಲ ಯಾವ ರಾಜಕೀಯ ಪಕ್ಷವೂ ಸಹಕಾರ ನೀಡದೇ ಇದ್ದದ್ದು ಒಂದು ವಿಪರ್ಯಾಸ. 

          ಎಪ್ಪತ್ತರ ದಶಕದಲ್ಲಿ ನಮ್ಮ ಮಾವನ ಮನೆ ನೆಕ್ಕಿಲಗುಡ್ಡೆಯಲ್ಲಿತ್ತು. ನೆಕ್ಕಿಲ ಗುಡ್ಡೆ ಮಂಗಳೂರಿನ ದೇರೇಬೈಲು ಗ್ರಾಮದಲ್ಲಿದ್ದ ಒಂದು ಗುಡ್ಡದ ಪ್ರದೇಶ. ಈಗ ಈ ಹೆಸರು ಜ್ಞಾಪಕದಲ್ಲೇ ಇರಲಾರದು. ಕೊಂಚಾಡಿಯಲ್ಲಿರುವ ಈಗರ್ಜಿಯ ಹಿಂಭಾಗದ ಪ್ರದೇಶವೇ ನೆಕ್ಕಿಲಗುಡ್ಡೆ. ಕುಂಟಿಕಾನದ ಬಳಿ ಈಗ ಇರುವ ಡಿ ಮಾರ್ಟ್ ಪಕ್ಕದಲ್ಲೇ ರಾಷ್ಟ್ರಿಯ ಹೆದ್ದಾರಿಯಿಂದ ಬಲ ಬದಿಗೆ ಕವಲಾಗಿ ಇಳಿಯುವ ರಸ್ತೆ ಸ್ವಲ್ಪ ಮುಂದಕ್ಕೆ ಹೋದರೆ ಗುಡ್ಡದ ತುದಿಯಲ್ಲಿ ನಮ್ಮ ಮಾವನ ಮನೆ ಇತ್ತು. ಈಗ ಅಲ್ಲೊಂದು ದೊಡ್ಡ ವಸತಿ ಸಮುಚ್ಚಯವಿದೆ. ಆ ಪ್ರದೇಶಕ್ಕೆ ಈಗ ಹೊಸ ಹೆಸರು ಕೂಡ ಬಂದಿದೆ. 

೧೯೬೮ ನೇ ಇಸವಿ ಅಥವಾ ಎಪ್ಪತ್ತರ ದಶಕದ ಆರಂಭದಲ್ಲಿ ಉರ್ವಸ್ಟೋರ್ ನಲ್ಲಿ ನಮ್ಮ ಬಾಡಿಗೆ ಮನೆ ಇತ್ತು. ಕಾರಣಾಂತರದಿಂದ ಅಲ್ಲಿಂದ ನೆಕ್ಕಿಲಗುಡ್ಡೆಗೆ ನಮ್ಮ ವಾಸಸ್ಥಳ ಬದಲಾಯಿತು. ಹೊಸ ಮಾರ್ಗ ಅಂದರೆ ರಾಷ್ಟೀಯ ಹೆದ್ದಾರಿಯನ್ನು ಸ್ಥಳೀಯರು ಕರೆಯುತ್ತಿದ್ದದ್ದು. ಅದರ ಬಳಿಯ ದೊಡ್ಡ ಗುಡ್ಡದ ತುದಿಯಲ್ಲಿ ಒಂದು ಮನೆ ಮತ್ತು ಒಂದೂವರೆ ಎಕರೆ ಜಾಗವಿತ್ತು.  ಒಂದು ಪಾತಾಳದ ಆಳಕ್ಕಿಳಿದ ಬಾವಿ ಮತ್ತು ಎರಡು ತೆಂಗಿನ ಗಿಡ ಇಷ್ಟೇ ಇದ್ದ ಜಾಗದಲ್ಲಿ ಸುತ್ತಮುತ್ತಲು ಬರೀ ಕಾಡು ಗಿಡಗಳು ಇದ್ದವು. ಆಗ ನನ್ನ ನೆನಪಿನಂತೆ  ತಿಂಗಳಿಗೆ  ಎಂಟು ರೂಪಾಯಿ ಗೇಣಿ ಅಧಾರದಲ್ಲಿ ನಾವೆಲ್ಲ ಅಲ್ಲಿ ವಾಸವಾಗಿದ್ದೆವು. ಗೇಣಿ ಎಂದರೆ ಅದು ಬಾಡಿಗೆಯಲ್ಲ. ಅಲ್ಲಿ ಕೃಷಿ ಮಾಡಿ ಬರುವ ಉತ್ಪನದಲ್ಲಿ ಪ್ರತಿ ತಿಂಗಳು ಒಂದಿಷ್ಟು ಮಾಲಿಕರಿಗೆ ಸಲ್ಲಿಸಬೇಕು. ಮೊದಲಿಗೆ ಎಲ್ಲವೂ ಸರಿಯಾಗಿತ್ತು. ಮನೆಯ ಮಾಲಿಕರು ಸುತ್ತಮುತ್ತಲಿನ ಗಣ್ಯ ಧನಿಕರಾಗಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಜದಲ್ಲೇ  ಗದ್ದೆ, ತೋಟ, ಆಗಿನ ಕಾಲದಲ್ಲಿ ದೊಡ್ಡ ಮನೆ ಹೀಗೆ ಅನುಕೂಲಸ್ಥ ಬ್ರಾಹ್ಮಣ ಕುಟುಂಬ. ಈಗ ಆ ಮನೆಯೂ ಇಲ್ಲ. ಆ ಗದ್ದೆಯೂ ದೊಡ್ಡ ಬಡಾವಣೆಯಾಗಿ ಬದಲಾಗಿ ಹೋಗಿದೆ. ಬಾಲ್ಯದಲ್ಲಿ ನಾವು ಅದೇ ಮನೆಗೆ ಅಗಾಗ ಹೋಗುತ್ತಿದ್ದೆವು.  

ನೆಕ್ಕಿಲಗುಡ್ಡೆಯ ಆ ಸ್ಥಳ ಯಾವುದೇ ಜನ ಸಂಚಾರ ಇಲ್ಲದ ಕಾಡು ಪ್ರದೇಶವದು. ಅಲ್ಲಿ ಹಲವಾರು ತೆಂಗಿನ ಗಿಡ, ಮತ್ತು ತರಕಾರಿ ಬೆಳೆಯುತ್ತಿದ್ದದ್ದು ಮಾತ್ರವಲ್ಲ ಮಾವನಿಗೆ  ಚಕ್ಕುಲಿ ತಯಾರಿಸಿ ಮಾರಾಟಮಾಡುವ ವ್ಯಾಪಾರವೂ ಇತ್ತು.  ಬರೀ ಗುಡ್ಡ ಕಾಡಿನ ಪ್ರದೇಶವನ್ನು ಸ್ವಂತ ಪರಿಶ್ರಮದಿಂದ ಮಾವ ಸುಂದರ ತೆಂಗಿನ ತೋಟವನ್ನಾಗಿ ಪರಿವರ್ತಿಸಿದ್ದರು. ಆಳವಾದ ಬಾವಿಯಿಂದ ನೀರು ಸೇದಿ ಕೃಷಿಯನ್ನು ಮಾಡುವುದೆಂದರೆ ಕಲ್ಪಿಸುವುದಕ್ಕೂ ಸಾಧ್ಯವಾಗದ ಸಾಧನೆ


ನಮ್ಮ ಮನೆಯ ಸುತ್ತ ಮುತ್ತ ಹೆಚ್ಚು ಕ್ರಿಶ್ಚನ್ ಮನೆಗಳೇ ಇದ್ದವು. ಎಲ್ಲಾ ಮನೆಯವರೂ ಕಾಂಗ್ರೆಸ್ ಅನುಯಾಯಿಗಳು ಮಾತ್ರವಲ್ಲಿ ಇಂದಿರಾಗಾಂಧಿಯ ಪರಮ ಭಕ್ತರಾಗಿದ್ದರು. ಇಂದಿರಾ ಹತ್ಯೆಯ ಸಮಯದಲ್ಲಿ ಹಲವರು ಕೇಶ ಮಂಡನ ಅಂದರೆ ಬೋಳು ತಲೆಯನ್ನು ಮಾಡಿದ್ದರು. ಅಂತಹ ಭಕ್ತಿ. ಆಗ ಭೂಸುಧಾರಣೆ ಕಾಯಿದೆ ಬಂದ ಕಾಲ. ಹೆಚ್ಚಿನವರಿಗೆ ಆ ಕಾನೂನಿನ ಅರಿವೂ ಇಲ್ಲ. ಅದರ ಮಹತ್ವವೂ ಗೊತ್ತಿಲ್ಲ. ನಮ್ಮ ಮಾವನಿಗೂ ಅದರ ಅರಿವು ಇರಲಿಲ್ಲ. ಕೊನೆಗೆ ಯಾರೋ ಹೇಳಿ ಕಾನೂನಿನ ಬಗ್ಗೆ ತಿಳಿದು ಬಂತು. ಇದರ ನಡುವೆ ನಮ್ಮ ಮನೆಯ ಜಾಗದ ಮಾಲಿಕರು ಒಂದು ದಿನ ಮಾವನನ್ನು ಪುಸಲಾಯಿಸಿ ಒಂದು ಬಾಡಿಗೆ ಚೀಟಿ ಮಾಡಿ ಸಹಿ ಪಡೆದರು. ಒಂದು ರೀತಿಯ ವಂಚನೆ ಅದು. ಆದರೆ ಮಾವನಿಗೆ ಆನಂತರ  ಉಳುವವನೇ  ಹೊಲದೊಡೆಯ ಎಂಬ ಕಾನೂನಿನ ಬಗ್ಗೆ ತಿಳಿದು ಮಾಲಿಕರ ಮೇಲೆ ಮೊಕದ್ದಮೆ ಹಾಕಿದರು. ಇದು ಬಹಳ ದೊಡ್ಡ ಗಲಾಟೆಗೆ ಕಾರಣವಾಯಿತು. ನಮ್ಮ ವಕ್ಕಲೆಬ್ಬಿಸುವುದಕ್ಕೆ ಹಲವು ಪ್ರಯತ್ನಗಳು ನಡೆದವು. ಹಲವಾರು ಜನ ಬಂದು ಬೆಳೆದ ತೆಂಗಿನ ಮರ ಗಿಡಗಳನ್ನು ಕಡಿ ಹಾಕಿದರು. ಆಗೆಲ್ಲ ಸುತ್ತಮುತ್ತಲಿನವರು ಯಾರೂ ಸಹಾಯಕ್ಕೆ ಬರಲಿಲ್ಲ. ಸುತ್ತ ಮುತ್ತಲಿನ ಇಂದಿರಾ ಭಕ್ತರು ಮಾಲಿಕರ ಪರವಾಗಿಯೇ ನಿಂತು ಬಿಟ್ಟರು. ಅವರ ದೃಷ್ಟಿಯಲ್ಲಿ ಮಾವ ದೊಡ್ಡ ವಂಚಕ ಮೊಸಗಾರರಾಗಿಬಿಟ್ಟರು. 

ಇಂದಿರಾಗಾಂಧಿಯ ಅನುಯಾಯಿಗಳೇ ಈ ಕಾನೂನಿಗೆ ವಿರುದ್ಧವಾಗುವಾಗ ನಾವು ನಂಬುವ ತತ್ವಗಳಿಗೆ ಬೆಲೆ ಎಲ್ಲಿ ಉಳಿಯುವುದಕ್ಕೆ ಸಾಧ್ಯ.? ಆದರ್ಶಗಳು ಎಷ್ಟು ಉಜ್ವಲವಾಗಿದ್ದರೂ ಅದು ಅನುಸರಿಸಿದೇ ಇದ್ದರೆ ಅದಕ್ಕೆ ಮೌಲ್ಯ ಒದಗಿ ಬರುವುದಿಲ್ಲ. ಮಾಲಿಕರು ಜನಗಳನ್ನು ತಂದು ಧಾಳಿ ಮಾಡಿದಾಗ ಆತ್ಮೀಯವಾಗಿ ವರ್ತಿಸಿದ  ಸುತ್ತಮುತ್ತಲಿನವರೆಲ್ಲ      ಕೈಗೆ ಸಿಕ್ಕಷ್ಟು ಕಿತ್ತುಕೊಂಡು ಹೋಗಿ ಮುಖವಾಡವನ್ನು ಬಯಲು ಮಾಡಿದರು. ಇಂದು ಇಂದಿರಾಗಾಂಧಿ ಭೂಸುಧಾರಣೆ ಜಾರಿಗೆ ತಂದರು, ನಮ್ಮ ಪಕ್ಷ ಕ್ರಾಂತಿ ಮಾಡಿತು ಅಂತ ಬೆನ್ನು ತಟ್ಟುವಾಗ ನಮ್ಮ ಬೆನ್ನೆಲುಬು ಮುರಿಯುವಂತಾದದ್ದು, ನಮಗಾದ ವಂಚನೆ ಎಲ್ಲವೂ ನೆನಪಿಗೆ ಬರುತ್ತದೆ. ಹೇಳುವುದಕ್ಕೆ ಬ್ರಾಹ್ಮಣರು ಮೋಸ ಮಾಡಿದರು ದಬ್ಬಾಳಿಕೆ ಮಾಡಿದರು ಹೀಗೆ ಹೇಳುವುದುಂಟು..ಆದರೆ ಸ್ವತಃ ನಮಗಾದ ಅನ್ಯಾಯಕ್ಕೆ ಕೇವಲ ಒಂದು ಧರ್ಮ ಕಾರಣವಾಗಲಿಲ್ಲ. ವಾಸ್ತವದ ಸತ್ಯವೇ ಕಾರಣವಾಗಿತ್ತು.  

ಆಂದು ನಿಶ್ಚಯಿಸಿದ ಗರೀಭಿ ಹಠಾವೋ ಎಂಬ ಘೋಷವಾಕ್ಯ ಇಂದಿಗೂ ಅದು ಮಹಾ ಸುಳ್ಳಾಗಿ , ಗರೀಬಿ ಎನ್ನುವ ಶತ್ರು ಇನ್ನೂ ಬದುಕಿದ್ದರೆ ಅದಕ್ಕೆ ಕಾರಣ ನಮ್ಮ ವ್ಯವಸ್ಥೆ. ಇಲ್ಲವಾದರೆ ಇಂದಿಗೂ ನಮಗೆ ಸಮಾಜ ಉದ್ದಾರಕ್ಕೆ ಧರ್ಮಾಧರಿತ ಮೀಸಲಾತಿಯ ಅವಶ್ಯಕತೆ ಇದೆ. ಬಡತನ ಧರ್ಮದಿಂದ ಅಳೆಯುವ ಅವಶ್ಯಕತೆ ಇದೆ ಎಂದರೆ ಅದಕ್ಕೆ ಕಾರಣರು ಯಾರು ಎಂಬುದು ಉತ್ತರವಿದ್ದರೂ ಹೇಳಲಾಗದ ಅಸಹಾಯಕತೆ ಇದೆ. 

Saturday, May 24, 2025

ಹಾಲು



        ನಮ್ಮ ಬಾಲ್ಯದ ಸಮಯದಲ್ಲಿ ಹಾಲು..ಮೊಸರು ತುಪ್ಪ ಇವುಗಳು ಇರುವ ಮನೆಗಳು ಶ್ರೀಮಂತರ ಮನೆಯಾಗಿರುತ್ತಿತ್ತು. ಇವುಗಳು ಇರಬೇಕಾದರೆ ಆ ಮನೆಯಲ್ಲಿ ಹಸು ಎಮ್ಮೆ ಇವುಗಳನ್ನು ಸಾಕುವುದು ಅನಿವಾರ್ಯ. ಮಾತ್ರವಲ್ಲ ನಮ್ಮಂತಹ ಬಡತನದ ಮನೆಯವರು ಮುಂಜಾನೆ ಎದ್ದು ಒಂದು ಚಿಕ್ಕ ಪಾತ್ರೆ ಹಿಡಿದು ಕೊಂಡು ಈ ಶ್ರೀಮಂತರ ಮನೆಯ ಜಗಲಿಯಲ್ಲಿ ಕಾದು ಕುಳಿತುಕೊಳ್ಳುವುದು ಸಾಮಾನ್ಯ. ಒಂದು ಕುಡುತೆ ಹಾಲಿಗಾಗಿ ಅವರ ಮನೆಯ ಜಗಲಿಯಲ್ಲಿ ಕಾದು ಕುಳಿತು, ಅವರ ದನದ ಹಾಲು ಅವರು ಕರಿಯುವುದನ್ನೇ ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು. ಹಲವು ಸಲ...ಕಾಯುವುದರ ನಡುವೆ ಅವರ ಮನೆಯ ಸಣ್ಣ ಪುಟ್ಟ ಚಾಕರಿಯನ್ನೂ ಮಾಡಬೇಕಾಗುತ್ತಿತ್ತು.   ಬೆಳಗ್ಗೆ ಎದ್ದು ಹಾಲು ತರುವುದು ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಬಹಳ ದೂರದವರೆಗೂ ನಡೆದು ಹೋಗಬೇಕಾಗುತ್ತಿತ್ತು. ಅದೂ ಬರೀಗಾಲಲ್ಲಿ ನಡೆದುಕೊಂಡು  ಬೆಳ್ಳಂಬೆಳಗ್ಗೆ ಚಳಿಗೆ ಹಾಲು ತರುವ ಕೆಲಸ ಅತ್ಯಂತ ಕಷ್ಟಕರದ ಕೆಲಸ.   ಅದು ಒಂದಾದರೆ, ಇನ್ನು ಕೆಲವರಿಗೆ ಹಾಲು ತರುವುದಕ್ಕೆ ಹಣವೇ ಇರುವುದಿಲ್ಲ. ನಮ್ಮೂರಲ್ಲಿ ಕಣ್ಣ ಚಹ ಅಂತ ಹೇಳುವ ಹಾಗೆ ಹಾಲಿಲ್ಲದ ಕಪ್ಪು ಚಹವೇ ಕುಡಿಯಬೇಕಿತ್ತು. ಇನ್ನು ಕೆಲವರಿಗೆ ಹಾಲು ಹಾಕಿದ ಚಹಕ್ಕಿಂತಲೂ ಈ ಕಣ್ಣ ಚಹವೇ ಹೆಚ್ಚು ಇಷ್ಟವಾಗುತ್ತಿತ್ತು.  ಆದರೆ ನಮ್ಮ ಮನೆಯಲ್ಲಿ ಕೆಲವು ಸಲ ಹೀಗೆ ಹಾಲು ತರುವ ವಾಡಿಕೆ ಇತ್ತು.  ಈಗ ಬಿಡಿ ಪ್ಯಾಕೆಟ್ ಹಾಲು ಸಿಗದ ಊರಿಲ್ಲ. ಹಳ್ಳಿಯಲ್ಲೂ ಈ ಪ್ಯಾಕೆಟ್ ಹಾಲೇ ಆಸರೆ. 

  ಬಾಲ್ಯದಲ್ಲಿ ನನಗೆ ನೆನಪಿದೆ,  ಈಗಿನ ಕಾಯರ್ ಕಟ್ಟೆಯ ಶಾಲೆಯ ಬಳಿ ನಮ್ಮಅಜ್ಜನಿಗೆ ಒಂದು ಹೋಟೇಲಿತ್ತು. ಆಗ ಹೋಟೇಲಿಗೆ ಹಾಲು ಬೇಕು. ಈಗಿನ ಹಾಗೆ ಪ್ಯಾಕೆಟ್ ನಲ್ಲಿ ಹಾಲು ಬರುವುದಿಲ್ಲ. ಈಗಿನ ಮಕ್ಕಳಿಗೆ ಹಾಲು ಮೂಲದಲ್ಲಿ ಎಲ್ಲಿಂದ ಬರುತ್ತದೆ ಎಂದೇ ತಿಳಿದಿರುವುದಿಲ್ಲ. ಹೆತ್ತ ತಾಯಂದಿರೇ ಹಾಲು ಕೊಡುವುದಕ್ಕೆ ಹಿಂಜರಿಯುವಾಗ ಹಾಲು ಎಂಬುದು ಒಂದು ಪ್ರಾಣಿ ಜನ್ಯ ಎಂಬ ಅರಿವು ಬಂದರೆ ಅದೇ ಭಾಗ್ಯ.  ಹಾಲನ್ನು ಹಸುವಿನಿಂದ ಕರೆಯಲಾಗುತ್ತೆ ಎಂಬ ಅರಿವೇ ಇಲ್ಲದ ಕಾಲಮಾನ.  ಮುಂಜಾನೆ ಎದ್ದು ಒಂದು ಪಾತ್ರೆ ಹಿಡಿದು ಕಾಯರ್ ಕಟ್ಟೆಯ ಕುಂಡೇರಿ ಎಂಬ ಜಾಗದಲ್ಲಿ ಬ್ರಾಹ್ಮಣರ  ತೋಟದ ಮನೆಗೆ ಹೋಗುತ್ತಿದ್ದೆ. ಆಗ ಹಾಲು ತರುವುದಕ್ಕಿಂತಲೂ ಅಲ್ಲಿ ಬೆಳಗ್ಗೆ ತಿಂಡಿಯ ಸಮಯ. ಬಿಸಿ ಬಿಸಿ ಗೋದಿ  ದೋಸೆ ತಟ್ಟೆಯಲ್ಲಿ ಹಾಕಿ ಕೊಡುತ್ತಿದ್ದರು. ಮನೆಯಲ್ಲಿ ಅರೆ ಹೊಟ್ಟೆಯ ಹಸಿವು,   ಆ ಹಸಿವಿನ ಹೊತ್ತಿಗೆ ಆ ದೋಸೆಯ ಆಶೆಗೆ ಹಾಲು ತರುವುದಕ್ಕೆ ಕಷ್ಟವಾದರೂ ಉತ್ಸಾಹದಿಂದ ಹೋಗುತ್ತಿದ್ದೆ ಬಿಸಿ ದೋಸೆಯ ಆಕರ್ಷಣೆ ಬೆಳಗ್ಗಿನ ಚಳಿಯನ್ನು ಮೀರಿ ನಿಲ್ಲುತ್ತಿತ್ತು.  ಈಗಲೂ ಹಾಲಿನ ನೆನಪಾದಾಗ ಆ ಮನೆಯ ಬಿಸಿ ದೋಸೆ ನೆನಪಾಗುತ್ತಿರುತ್ತದೆ. 

ಹಾಲು ಮೊಸರು ತುಪ್ಪ...ಇದ್ದ ಮನೆಗಳು ಧನಿಕರ ಮನೆ ಅಂತ ಲೆಕ್ಕ. ಎಷ್ಟೇ ಬಡತನವಿದ್ದರೂ ಕೆಲವರು ಒಂದಾದರೂ ಹಸುವನ್ನು ಸಾಕುತ್ತಿದ್ದರು. ವರ್ಷಕ್ಕೆ ಒಂದು ಸಲ ಆ ಹಸು ಕರು ಹಾಕುವಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ಇನ್ನು ಹಾಲು ತರುವುದಕ್ಕೆ ಬೇರೆ ಕಡೆಗೆ ಹೋಗುವ ಹಾಗಿಲ್ಲ. ಬದಲಿಗೆ ನಮ್ಮ ಮನೆಗೆ ಹಾಲು ಕೊಂಡು ಹೋಗುವುದಕ್ಕೆ ಯಾರಾದರು ಬರುತ್ತಾರೆ. ಮತ್ತು ನಮ್ಮ ಮನೆಯ ಜಗಲಿಯಲ್ಲಿ ಕಾದುಕುಳಿತು ಬಿಡುತ್ತಾರೆ. ಹೀಗೆ ಏನೇನೋ ಆಕಾಂಕ್ಷೆಗಳು. ಈಗ ಹಾಲು ಇಲ್ಲದ ಮನೆ ಇಲ್ಲ. ಆದರೆ ಹಾಲು ಪ್ಯಾಕೆಟ್ ನಲ್ಲಿ ಬರುತ್ತದೆ ಮಾತ್ತ ವಾಸ್ತವ. ಮನೆಯ ಪಕ್ಕದ ರಸ್ತೆಯಲ್ಲಿ ಅಂಗಡಿ ಇದ್ದರೂ ಅಲ್ಲಿಂದ ಹಾಲು ತರುವುದಕ್ಕೆ ಉದಾಸೀನ. ಅದಕ್ಕೆ ಮನೆಯಲ್ಲಿ ಜನ ಇರುವುದಿಲ್ಲ. ಎಷ್ಟೇ ಬಡವರಾದರು ಒಂದು ಪ್ಯಾಕೆಟ್ ಆದರೂ ಹಾಲು ತಂದೇ ತರುತ್ತಾರೆ. ಮನೆಯಲ್ಲಿ ಹಸು ಎಮ್ಮೆ ಸಾಕುವವರು ಇಲ್ಲದೇ ಇದ್ದರೂ ಹಾಲು ಕುಡಿಯದ ಮನೆ ಇರಲಾರದು. 

ಹಾಲು ಮೊಸರು ತುಪ್ಪ ಅದರಲ್ಲೂ ಮೊದಲು ತುಪ್ಪ ಎಂಬುದು ಬಡವರ ಮನೆಯಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಹಸುವನ್ನು ಸಾಕಿದ ಮನೆಯಲ್ಲೂ ತುಪ್ಪ ಇದ್ದರೂ ಅದನ್ನು ತಿನ್ನುವುದಕ್ಕೂ ಯೋಗ್ಯತೆ ಇರುತ್ತಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಪ್ರತೀ ಮನೆಯಲ್ಲೂ ಹಾಲು ತುಪ್ಪ ಅನಿವಾರ್ಯ ಘಟಕಗಳು. ಆದರೆ ಪ್ರತೀ ವರ್ಷ ಈ ಹಾಲಿನ ಬೆಲೆ ಹೆಚ್ಚಾಗುತ್ತಾ ಇರುತ್ತದೆ. ಸರಕಾರ ರೈತರಿಗಾಗಿ ಹಾಲಿನ ಬೆಲೆ ಹೆಚ್ಚಳ ಎಂದು ಮಾಡುತ್ತವೆ. ಇದರಲ್ಲಿ ಅಸಲಿ ರೈತರಿಗೆ ಎಷ್ಟು ಸಹಾಯವಾಗುತ್ತದೋ ಅದು ಬೇರೆ ವಿಷಯ. ಆದರೆ ಸರಕಾರ ಯಾವುದೋ ಉಚಿತ ಕೊಡುಗೆಗಳನ್ನು ಕೊಡುತ್ತವೆ. ಆಧನ ಈಧನ ಅಂತ ಸಹಾಯ ಧನವನ್ನು ಕೊಡುತ್ತದೆ. ಅದರೆ ಬದಲು ಈ ಹಾಲು ಉಚಿತವಾಗಿ ಕೊಟ್ಟರೆ ಅನುಕೂಲ. ಹಣ ನಗದಾಗಿ ಕೊಡುವುದರಿಂದ ಹಲವು ಸಲ ಅದು ದುರುಪಯೋಗವೂ ಆಗುವ ಸಂಭವ ಇರುತ್ತದೆ. ಹೆಂಡತಿ ಕೈಯಲ್ಲಿ ಹಣ ಇದ್ದರೆ ಗಂಡ ಸುಮ್ಮನೆ ಕುಳಿತುಕೊಳ್ಳಬಹುದೇ? ಅದನ್ನು ಹೇಗಾದರೂ ಮಾಡಿ ಕಿತ್ತು ಹೆಂಡದಂಗಡಿಗೆ ಸುರಿವ ಸಂಭವ ಇಲ್ಲ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಈ ಹಾಲು ಉಚಿತವಾಗಿ ಕೊಟ್ಟರೆ ಅದನ್ನು ಕುಡಿದೇ ಮುಗಿಸಬೇಕು. ಪರೋಕ್ಷವಾಗಿ ಇದು ರೈತರಿಗೆ ಸಹಾಯವಾಗಬಹುದು. ಅಲ್ಕೋ ಹಾಲಿನ ಬೆಲೆ ಹೆಚ್ಚಳಕ್ಕಿಂತಲೂ ಈ ಪ್ಯಾಕೆಟ್ ಹಾಲಿನ ಬೆಲೆ ಹೆಚ್ಚಳ ಮನುಷ್ಯರಿಗೆ ಹೆಚ್ಚು ತೊಂದರೆಯನ್ನು 

Thursday, May 15, 2025

ಬ್ರಾಹ್ಮಣ ಜನ್ಮ

 

 

ಬ್ಯಾಂಕ್ ಒಂದರ ಲೆಕ್ಕ ಪರಿಶೋಧನೆಗೆ ಹೋಗುತ್ತಿರುವಾಗ ಒಂದು ಕಡೆಯಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರು ನನ್ನ ಜತೆಗೆ ಇರುತ್ತಿದ್ದರು. ಮಧ್ಯ ವಯಸ್ಸಿನ ವ್ಯಕ್ತಿ. ಊರಿಂದ ಊರಿಗೆ ಹೋಗುವ ವೃತ್ತಿಯಲ್ಲಿ ಅವರ ಜೀವನಾನುಭವ ಬಹಳಷ್ಟು ಇತ್ತು. ಸ್ವತಃ ಬ್ರಾಹ್ಮಣರಾದ ಅವರು ನನಗೆ ಬಹಳಷ್ಟು ಅತ್ಮೀಯರಾಗಿಬಿಟ್ಟರು. ವಾಚಾಳಿಯಾಗಿ ಏನಾದರೊಂದು ವಿಷಯ ಮಾತನಾಡುತ್ತಲೇ ಇರುವ ನಾನು ಅವರಿಗೆ ಇಷ್ಟವಾದ ಬಗೆ ಹೇಗೋ ಗೊತ್ತಿಲ್ಲ. ಹಲವು ಸಲ ನನ್ನ ಅಧಿಕ ಮಾತುಗಳು ನನಗೆ ಅಧಿಕ ಪ್ರಸಂಗವಾಗಬಹುದೇ ಎಂಬ ಆತಂಕ ನನಗೆ ಇರುತ್ತಿತ್ತು. ಎಷ್ಟು ಕಡಿಮೆ ಎಂದರೂ ಕೆಲವೊಮ್ಮೆ ಮಾತಿಗೆ ಮಾತು ಬೆಸೆಯುತ್ತಾ ಇರುವುದು ನನ್ನ ಜೀವನೋತ್ಸಾಹದ ಒಂದು ಕಾರಣ. ಹಾಗಾಗಿ ಉಳಿದವರು ಏನು ತಿಳಿಯುತ್ತಾರೋ ಎನ್ನುವುದಕ್ಕಿಂತ ನನ್ನ ಮನಸ್ಸು ನಿರಾಳವಾಗುತ್ತದಲ್ಲಾ ಎಂಬ ಧೋರಣೆಯಲ್ಲಿ ಮಾತನಾಡುತ್ತಾ ಇರುವುದು ನನ್ನ ಸ್ವಭಾವ. ಇದೇ ಸ್ವಭಾವ ಅವರಿಗೆ ಇಷ್ಟವಾಗಿಬಿಟ್ಟಿತು. ಕೆಲಸದ ನಡುವೆ ನಾವು ಮಾತನಾಡದ ವಿಷಯಗಳೇ ಇರುತ್ತಿರಲಿಲ್ಲ. ಸ್ವತಃ ಬ್ರಾಹ್ಮಣರಾದ ಕಾರಣ ಅತೀ ಹೆಚ್ಚು ವೈದಿಕ ವಿಚಾರಗಳೇ ನಮ್ಮ ನಡುವೆ ಹರಿದಾಡುತ್ತಿತ್ತು. 

ಮೊನ್ನೆ ಒಂದು ದಿನ ಅವರಲ್ಲಿ ಹಾಸ್ಯಕ್ಕಾಗಿ ಕೇಳಿದೆ. "ಮತ್ತೊಂದು ಜನ್ಮ ಎಂದು ನಿಮಗೆ ಇದ್ದರೆ, ನೀವು ಬ್ರಾಹ್ಮಣರಾಗಿ ಹುಟ್ಟಲು ಬಯಸುತ್ತಿರಾ? " ಇದು ಕೇವಲ ಹಾಸ್ಯವಲ್ಲ  ಎಂದು ಅವರು ನೀಡಿದ  ಉತ್ತರದಲ್ಲೇ ವ್ಯಕ್ತವಾಗುತ್ತಿತ್ತು. ಅವರೇ ಹೇಳಿದರು ಬಹಳ ಗಂಭೀರ ಪ್ರಶ್ನೆ ಮಾರಾಯರೆ ಎಂದ ಅವರು ಹೇಳಿದ ಸಾರಾಂಶ ಹೀಗಿತ್ತು. 

ನಿಜಕ್ಕಾದರೆ ಬ್ರಾಹ್ಮಣನಾದವನು ಮತ್ತೊಂದು ಜನ್ಮದ ಬಗ್ಗೆ ಯೋಚಿಸುವುದಿಲ್ಲ. ಇನ್ನು ಮತ್ತೊಂದು ಜನ್ಮವೆತ್ತುವ ವಿಷಯವೇ ಉದ್ಭವಿಸುವುದಿಲ್ಲ. ಜನ್ಮ ಎತ್ತುವುದೆಂದರೆ ದುರಿತಗಳು ಅಂದರೆ ಪಾಪ  ಪರಿಹಾರವಾಗದೆ ಉಳಿದಿದೆ. ಆ ದುರಿತ ಕ್ಷಯಕ್ಕೆ   ಮತ್ತೊಂದು ಜನ್ಮ ಎತ್ತಿ ಅದನ್ನು ಪರಿಹರಿಸಿಬಿಡಬೇಕು. ವಾಸ್ತವದಲ್ಲಿ ಬ್ರಾಹ್ಮಣನಾಗುವುದೆಂದರೆ ಮತ್ತೊಮ್ಮೆ ಹುಟ್ಟುವ ಪ್ರಮೇಯವೇ ಉದಿಸುವುದಿಲ್ಲ. ತಾತ್ವಿಕವಾಗಿ ಬ್ರಾಹ್ಮಣನಾಗುವುದು ಎಂದರೆ ಮತ್ತೊಮ್ಮೆ ಹುಟ್ಟಿ ಬರದ ಲೋಕಕ್ಕೆ ಹೋಗುವುದು. ಭಗವಂತನಲ್ಲಿ ಐಕ್ಯವಾಗಿ ಸಾಯುಜ್ಯ ಪದವಿಯನ್ನು ಏರುವುದೆಂದರೆ ಅಲ್ಲಿ ಮತ್ತೆ ಹುಟ್ಟುವ ಪ್ರೆಮೇಯವೂ ಇರುವುದಿಲ್ಲ.

ಅವರು ತಿಳಿದಂತೆ ನಾನು ಆ ಪಾರಮಾರ್ಥಿಕ ಅರ್ಥದಿಂದ ಕೇಳಲಿಲ್ಲ. ಬದಲಿಗೆ ವ್ಯಾವಹಾರಿಕ ಪ್ರಪಂಚದಲ್ಲಿನ ವಾಸ್ತವಿಕ ವಿಚಾರದಲ್ಲಿ ಕೇಳಿದ್ದೆ. ಅವರು ಹೇಳಿದರು ಮತ್ತೆ ಹುಟ್ಟುವ ಬಯಕೆ ಇಲ್ಲ. ಹಾಗೊಂದು ವೇಳೆ ಬ್ರಾಹ್ಮಣನಾಗಿ ಹುಟ್ಟಬೇಕೆ? ಹಲವು ಸಲ ಅನ್ನಿಸುತ್ತದೆ , ಹುಟ್ಟುವುದೇ ಬೇಡ ಹುಟ್ಟಿದರೂ ಬ್ರಾಹ್ಮಣನಾಗಿ ಹುಟ್ಟಿಸಬೇಡ. ಬದುಕಿನ ಪ್ರತೀ ಹಂತದಲ್ಲೂ ಅವರಿಗಾದ ಅನುಭವದ ವ್ಯತಿರಿಕ್ತ ಪರಿಣಾಮವೇ ಇದಕ್ಕೆ ಕಾರಣ. ದೇವರೆ ಮತ್ತೆ ಹುಟ್ಟು ಬೇಡ, ಹುಟ್ಟಿಸಿದರೂ ಬ್ರಾಹ್ಮಣನಾಗಿ ಬೇಡ.  ಬಾಲ್ಯದಲ್ಲೇ ಜನಿವಾರವನ್ನು ಹಾಕಿದ ಉಡುಪಿನ ಮರೆಯಲ್ಲೇ ಇರಿಸುವಂತಹ ಘಟನೆಗಳು. ಅಂಗಿಯೊಳಗಿನ ಜನಿವಾರ ಮತ್ತೂ ಮತ್ತೂ ಚುಚ್ಚುತ್ತಾ ಇರುವ ಸನ್ನಿವೇಶಗಳು ನೆನಸುವಾಗ ಛೇ ಹುಟ್ಟಿದೆವಲ್ಲಾ ಅಂತ ಅನಿಸುತ್ತದೆ.  ಈಗೀಗ ಬನಿಯನು, ಅಂಗಿ ಅದರ ಮೇಲೆ ಕೋಟು ಶಲ್ಯ ಹೀಗೆಲ್ಲ ಇದ್ದರೂ  ಒಳಗೆ ಮರೆಯಲ್ಲಿದ್ದ ಜನಿವಾರ ಯಾರಿಗೋ ಚುಚ್ಚಿ ಬಿಡುತ್ತದೆ.  ಈತನಿಗೆ ಒಳಗೆ ಜನಿವಾರ ಇದೆ ಎನ್ನುವುದೇ ಅಸಹನೆಗೆ ಕಾರಣವಾಗುತ್ತದೆ. ಅದಕ್ಕಿರುವ ಕ್ಷುಲ್ಲಕ ಕಾರಣ ಕೇಳುವಾಗ,  ಚೂಡಿ ದಾರದ ಶಾಲು ದುಪ್ಪಟ್ಟ ಕಿಂತಲೂ ಈ ಮೂರೆಳೆ ಜನಿವಾರ ಗಂಭೀರವೆನಿಸುತ್ತದೆ. 

ಅವರ ಜೀವನಾನುಭವ ಬಹಳಷ್ಟು ದೊಡ್ಡದು. ಸದಾ ಊರಿಂದ ಊರಿಗೆ ಸಂಚರಿಸಬೇಕಾದ ಅನಿವಾರ್ಯತೆ. ಒಂದೊಂದು ಊರಲ್ಲಿ ಒಂದೊಂದು ಬಗೆಯ ಅನುಭವವಾದರೆ, ವೃತ್ತಿಯಲ್ಲಿ ಯೋಗ್ಯತೆ ಇದ್ದರೂ ಸಿಗಬೇಕಾದ ಮಾನ್ಯತೆ ಕೇವಲ ಜನಿವಾರದ ದೆಸೆಯಿಂದ ಸಿಗದಂತೆ ಆಗುವಾಗ ಹೀಗೆ ಹುಟ್ಟಬಾರದಿತ್ತು ಎಂದು ಹಲವು ಸಲ ಅವರಿಗೆ ಅನಿಸಿತ್ತು. ಬ್ಯಾಂಕ್ ನ ಕೇಂದ್ರ ಅಥವಾ ವಿಭಾಗಿಯ ಕಛೇರಿಯ ಉನ್ನತ ಸ್ಥಾನದಲ್ಲಿರಬೇಕಾದವರು, ಇಂದು ಒಂದು ಶಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ನಿರಂತರ ವೃತ್ತಿ ಮಾಡುವ ಅನಿವಾರ್ಯತೆ ಬಂದರೆ ಅದಕ್ಕೆ ಕಾರಣ ಅಂತರಂಗದ ಯಜ್ಞೋಪವೀತವಾದರೂ ಅದು ಬಹಿರಂಗದ ಸತ್ಯ. 

ಮೊದಲಿಗೆ ಅವರು ಹಾಗೆಂದರೂ ಕೊನೆಯಲ್ಲಿ ಅವರು ಹೇಳಿದರು, ವ್ಯಾವಹಾರಿಕ ಸತ್ಯಗಳು ಏನೇ ಇರಲಿ...ಆದರೆ ಸಾರ್ಥಕತೆಯ ವಿಚಾರ ಬರುವಾಗ  ಈ ಜನ್ಮವೇ ಅತ್ಯಂತ ಶ್ರೇಷ್ಠ ಎನಿಸುತ್ತದೆ.  ಯಾರಿಗೂ ದ್ರೋಹವೆಸಗದ, ಯಾರಿಂದಲೂ ಕಿತ್ತು ತಿನ್ನದ ಜೀವನ, ಮತ್ತೊಬ್ಬರ ಭಡ್ತಿಗೆ ಅಡ್ಡಿಯಾಗದ ವೃತ್ತಿ ಜೀವನ ಎಲ್ಲವೂ ಒಂದು ಬಗೆಯಲ್ಲಿ ತೃಪ್ತಿ ತಂದಿದೆ. ಭಗವಂತ ಅಂದರೆ ಏನು ಎಂದು ದರ್ಶನ ಒದಗಿಸುವ ನಿತ್ಯ ಧಾರ್ಮಿಕ ವಿಧಿಗಳು ಎಲ್ಲವೂ ತೃಪ್ತಿ ಒದಗಿಸಿದೆ. ಸಹಜವಾದ ಸರಳ ಬ್ರಾಹ್ಮಣ್ಯ ಸ್ಥಾನ ಹೆಚ್ಚಿಗೆ ಏನನ್ನು ಬಯಸದೆ ಇರುವಾಗ ಅಲ್ಲಿ ಸಿಗುವ ತೃಪ್ತಿ ಎಲ್ಲವೂ ಸಮಾಧಾನ ತಂದಿದೆ. ಸಾರ್ವಜನಿಕವಾಗಿ ಎದುರಾಗುವ ಪರಿಸ್ಥಿತಿಗಳು ಸಹಜವಾಗಿ ಕೀಳರಿಮೆಯನ್ನು ಹುಟ್ಟು ಹಾಕಿದರೂ,  ಸಮಾನವಾಗಿ ಅಂತರಂಗದಲ್ಲಿ ಸ್ವಾಭಿಮಾನದ ಪ್ರಚೋದನೆಯನ್ನು ಜಾಗೃತವಾಗಿಸುತ್ತದೆ. 

ನೈಷ್ಠಿಕವಾಗಿ ಪರಿಶುದ್ದ ಜೀವನ ನಡೆಸುವ ಬ್ರಾಹ್ಮಣನಿಗೆ ಮತ್ತೆ ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಎಲ್ಲವನ್ನು ಕಳೆದುಕೊಂಡು ಮುಕ್ತವಾಗಿ ಮುಕ್ತಿ ಪದಕ್ಕೆ ಸೇರುವಾಗ ಮತ್ತೊಂದು ಜನ್ಮವಿದ್ದರೆ ಬ್ರಾಹ್ಮಣನಾಗಿ ಗಳಿಸುವುದಕ್ಕೆ ಏನೂ ಇರುವುದಿಲ್ಲ. ಹಾಗಾಗಿ ಆ ಬಯಕೆಯ ಅಸ್ತಿತ್ವವೇ ಇರುವುದಿಲ್ಲವಾದ ಕಾರಣ ನನ್ನ ಪ್ರಶ್ನೆ ಅವರ ಎದುರು ಅರ್ಥವನ್ನು ಕಳೆದುಕೊಂಡದ್ದು ಸತ್ಯ. 

Saturday, May 10, 2025

ಕ ದನ ವಿ ರಾಮ

  

           




  ಮಹಾಭಾರತ....ಎಂದೊಡನೆ ನನಗೆ ಮೊದಲು ನೆನಪಾಗುವುದು  ಭೀಷ್ಮನ ಪಾತ್ರ. ಮಹಾಭಾರತದಲ್ಲಿ ಭೀಷ್ಮ ಎಂಬ ಮಾಹಾನ್ ವ್ಯಕ್ತಿತ್ವ ವಿಮರ್ಶೆಗೆ ಒಳಗಾದಷ್ಟು ಬೇರೆ ಪಾತ್ರ ವಿಮರ್ಶೆಗೆ ಒಳಗಾಗಿಲ್ಲ. ಅತ್ಯಂತ ಶ್ರೇಷ್ಠ ಪಾತ್ರ ಶ್ರೀಕೃಷ್ಣನದು ಅದು ಬಿಟ್ಟರೆ ಅಲ್ಲಿ ಕಾಣುವುದು ಶ್ರೀಕೃಷ್ಣನ ಪರಮ ಭಕ್ತ, ಭಾಗವತೋತ್ತಮ ಧರ್ಮಿಷ್ಠ ಭೀಷ್ಮ.   ತಂದೆ ತಾಯಿ  ಜನ್ಮದಿಂದ ಇಟ್ಟ ಹೆಸರಿಗಿಂತಲೂ ತನ್ನ ಧೀಮಂತ ವ್ಯಕ್ತಿತ್ವದಿಂದ ಕರೆಸಲ್ಪಟ್ಟ ಹೆಸರಿನಿಂದಲೇ ಚಿರಸ್ಥಾಯಿ ಪದವಿಯನ್ನು ಪಡೆದ ಭೀಷ್ಮನ ವ್ಯಕ್ತಿತ್ವದ ಚರಿತ್ರೆ ಅರಿಯಲು ಪ್ರಯತ್ನಿಸಿದರೆ ಸಾಕು ಇಡೀ ಮಹಾಭಾರತ ಓದಿದಂತೆ. ಪರಮ ಧರ್ಮಿಷ್ಠ ನಾಗಿ, ಭಕ್ತ ಶೀರೋಮಣಿಯಾಗಿ ಧರ್ಮದ ಆಳ ಅಗಲವನ್ನು ತಿಳಿದ ಮಹಾಜ್ಞಾನಿಯಾಗಿ, ತನ್ನ ಜೀವನ ಸಂಧ್ಯೆಯಲ್ಲಿ ಧರ್ಮಕ್ಕೆ ಪ್ರತಿರೂಪ ಎನಿಸಿದ ಯುಧಿಷ್ಠಿರನಿಗೂ ಧರ್ಮೋಪದೇಶವನ್ನು ಮಾಡಿದ ಭೀಷ್ಮನ ಜೀವನ ಹಲವು ರೀತಿಯಲ್ಲಿ ವಿಮರ್ಶೆಗೆ ಒಳಗಾಗಿದೆ. ಇಂತಹ ವ್ಯಕ್ತಿ ಶ್ರೇಷ್ಠ ಮಹಾಭಾರತ ಯುದ್ದದಲ್ಲಿ ಯಾಕೆ ಕೌರವನ ಸೇನೆಯ ರಕ್ಷಕನಾದ? ಯಾಕೆ ಕೌರವನ ಪಕ್ಷವಹಿಸಿದ? ಶ್ರೀಕೃಷ್ಣನೂ ಭೀಷ್ಮನಲ್ಲಿ ಇದೇ ಪ್ರಶ್ನೆ ಕೇಳುತ್ತಾನೆ. ಧರ್ಮಿಷ್ಠ ಸತ್ಯವಂತ ಹೀಗೆಲ್ಲಾ ಯೋಗ್ಯತೆಗಳು ಹೌದು ಎಂದಾದರೆ ಧರ್ಮಾತ್ಮರಾದ ಪಾಂಡವರ ಜತೆಗೆ , ಅದರಲ್ಲೂ ಸ್ವಂತ ಮೊಮ್ಮಕ್ಕಳ ಜತೆಗೆ ಸೇರಬೇಕಿತ್ತು. ಇಷ್ಟಿದ್ದರೂ ಆತ ಜೀವನದ ಅಂತ್ಯದಲ್ಲೂ ಕುರು ಸೇನಾನಿಯಾಗಿಯೆ ತನ್ನ ಕಥೆಯನ್ನು ಅಂತ್ಯಗೊಳಿಸಿದ ಕಾರಣವಾದರೂ ಏನು? ಇದು ಹಲವು ರೀತಿಯಲ್ಲಿ ವಿಮರ್ಶೆಗೆ ಒಳಾಗಾಗಿದೆ. 

ಯಕ್ಷಗಾನದಲ್ಲಿ ಶೇಣಿ ಗೋಪಾಲ ಕೃಷ್ಣರ ಪಾತ್ರಗಳಲ್ಲಿ ಭೀಷ್ಮನ ಪಾತ್ರವನ್ನು ನಾನು ಬಹಳ ಇಷ್ಟ ಪಡುತ್ತೇನೆ. ಒಂದು ಕಡೆಯಲ್ಲಿ ಭೀಷ್ಮನಾಗಿ  ಅವರು ಹೇಳುತ್ತಾರೆ, ಸಾಯುವ ಕಾಲಕ್ಕೆ ಈ ಮೊಮ್ಮಕ್ಕಳ ಹೆಗಲ ಮೇಲೆ ವಿಶ್ರಾಂತಿಯನ್ನು ಪಡೆದೇನು ಎಂದು ಬಗೆದೆ ಕೃಷ್ಣಾ . ಆದರೆ ಈ ಮೊಮ್ಮಕ್ಕಳ ಜಗಳವನ್ನು ಪರಿಹರಿಸಲು ಸಾಧ್ಯವಾಗದೇ ಹೋಯಿತು. ಕುರುಕ್ಷೇತ್ರದ ಯುದ್ದದ ಬಗೆಯಲ್ಲಿ ಮರುಗಿದ ಭೀಷ್ಮನ ಮನದಾಳದ ಮಾತಿದು. ಯಾವುದೇ ಮನೆಯನ್ನಾಗಲೀ ರಾಜ್ಯವನ್ನಾಗಲೀ ಬಾಧಿಸುವ ಮೊದಲ ಶತ್ರುವೆಂದರೆ ಅದು ಒಳಜಗಳ. ಅಂತರಶತ್ರುಗಳು ಪರಮ ಶತ್ರುಗಳಾಗಿಬಿಡುತ್ತಾರೆ. ಮನುಷ್ಯನ ಸಾದ್ಯಂತ ಜೀವನದಲ್ಲೂ ಮನುಷ್ಯನ ಉತ್ಕರ್ಷದಲ್ಲೂ ಆತನ ಅಂತಃ ಶತ್ರುವಿನ ಪಾತ್ರ ಬಹಳ ದೊಡ್ಡದು. ಒಳಗಿನ ಶತ್ರುವನ್ನು ಗೆದ್ದವನಿಗೆ ಮಾತ್ರ ಉತ್ಕರ್ಶದಲ್ಲಿ ಸಾಯುಜ್ಯ ಪದವಿಯನ್ನು ಸೇರುವುದಕ್ಕೆ ಸಾಧ್ಯ. ಅದು ನಮ್ಮ ದೇಶಕ್ಕೂ ಅನ್ವಯ. 

ಭೀಷ್ಮ ಕೌರವ ಪಕ್ಷದಲ್ಲೇ ಯಾಕೆ ಹೋರಾಡಿದ. ಆತನೇ ಹೇಳುವಂತೆ, ಹಸ್ತಿನಾವತಿಯ ಸಿಂಹಾಸನ ರಕ್ಷಣೆ. ಇದು ಆತ ತಂದೆ ಶಂತನುವಿನಿಂದ ಮಲ ಮಾತೆ ಸತ್ಯವತಿಯಿಂದ ಪಡೆದ ಹೊಣೆಗಾರಿಕೆ. ಜೀವ ಇರುವತನಕ ತಾನು ಸಿಂಹಾಸನದ ವಿಧೇಯ ಸೇನಾಪತಿಯಾಗುತ್ತೇನೆ. ಅದರ ಆಧಿಪತ್ಯಕ್ಕೆ  ವಿಘ್ನ ಬರುವಲ್ಲಿ ಅದರ ವಿರುದ್ಧ ಹೋರಾಡುತ್ತೇನೆ. ಇದು ಜೀವನದಾದ್ಯಂತ ಆತ ಪಾಲಿಸಿಕೊಂಡು ಬಂದ ತತ್ವವಾದರೆ, ಕೊನೆಯಲ್ಲಿ ಮಹಾಭಾರತ ಯುದ್ದ....ಅದು ಕೇವಲ ಹಸ್ತಿನಾವತಿಯ ವೈರಿ ಎಂದು ಪರಿಗಣಿಸುವ ಹಾಗಿರಲಿಲ್ಲ. ಈ ದಾಯಾದಿ ಕಲಹ, ಅಣ್ಣ ತಮ್ಮಂದಿರು ಹೀಗೆ ಹೊಡೆದಾಡಿಕೊಂಡರೆ...ರಾಜ್ಯದ ಸಿಂಹಾಸನದ ಗತಿಯೇನಾಗಬೇಕು.? ಭೀಷ್ಮನಾಗಿ ಶೇಣಿಯವರು ಒಂದು ಕಡೆಯಲ್ಲಿ ಹೀಗೆ ಹೇಳಿಬಿಡುತ್ತಾರೆ. ಹಸ್ತಿನಾವತಿಗೆ ಹೊರಗಿನ ಶತ್ರು ಭಯವಿರಲಿಲ್ಲ. ಇಲ್ಲಿಯ ಅಣ್ಣತಮ್ಮಂದಿರ ಮನೆಯೊಳಗಿನ ಕಲಹವೇ ಸಾಕು. ಹಾಗಾಗಿ ಇಲ್ಲಿ ಈ ಜಗಳದಿಂದ ಸಿಂಹಾಸನ ರಕ್ಷಣೆ ಅನಿವಾರ್ಯವಾಗಿತ್ತು. ಕುರುಕ್ಷೇತ್ರದಲ್ಲಿ ಆತ ಹೋರಾಡಿದ ಹತ್ತು ದಿನಗಳಲ್ಲಿ ಆತ ಪರೋಕ್ಷವಾಗಿ ಪಾಂಡವ ರಕ್ಷಕನಾಗಿಯೇ ಹೋರಾಡಿದ. ಒಬ್ಬನೇ ಒಬ್ಬ ಪಾಂಡವನ ಕೂದಲೂ ಸಹ ಕೊಂಕಲಿಲ್ಲ.  ಇದು ಅಂತರಂಗದ ಸತ್ಯ. ಜತೆಯಲ್ಲಿ ಕೌರವನನ್ನು ರಕ್ಷಿಸಿದ. ಹಾಗಾದರೆ ಆತ ಹೋರಾಡಿದ್ದು ಯಾರ ಜತೆ? ಪಾಂಡವರ ಪಕ್ಷದಲ್ಲೂ  ದ್ರುಪದನಂತಹ ಹಸ್ತಿನಾವತಿ ಶತ್ರುಗಳಿದ್ದರು. ಈ ಅಣ್ಣ ತಮ್ಮಂದಿರ ಜಗಳದಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕ  ಶತ್ರುಗಳಿದ್ದರು. ಅವರಿಂದ ಹಸ್ತಿನಾವತಿಯ ರಕ್ಷಣೆ ಆಗಬೇಕಿತ್ತು. ಮತ್ತೆ ಅಣ್ಣ ತಮ್ಮಂದಿರ ಜಗಳ ಆನಂತರ. ಹಸ್ತಿನಾವತಿಯ ಸಿಂಹಾಸನದಲ್ಲಿ ಒಬ್ಬ ಪರಮ ಧರ್ಮಿಷ್ಠ ಅಧಿಕಾರಕ್ಕೆ ಏರಬೇಕು. ಅದುವರೆಗೆ ತನಗೆ ವಿಶ್ರಾಂತಿ ಇಲ್ಲ, ಎಂದು ಬಗೆದವನು ಭೀಷ್ಮ. ಹಾಗಾಗಿ ಹೊರಗಿನ ಎಲ್ಲಾ ಶತ್ರುಗಳನ್ನು ಜಯಿಸಿ ನೀವಾರಿಸಿಕೊಳ್ಳಬಲ್ಲ ಭೀಷ್ಮನಿಗೆ ಈ ಒಳಗಿನ ಶತ್ರುಗಳನ್ನು ಜಯಿಸುವುದು ಕೊನೆಯವರೆಗೂ ಸಾಧ್ಯವಾಗಲಿಲ್ಲ. ಇಡೀ ಹಸ್ತಿನಾವತಿಯೇ ಅದರಲ್ಲಿ ಹೊತ್ತಿ ಉರಿದು ಹೋಯಿತು. 

ನಮ್ಮ ವರ್ತಮಾನ  ಭಾರತದ ಸದ್ಯದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಾವು ಯಾವುದರಲ್ಲಾದರೂ ಗೆಲುವು ಸಾಧಿಸಿ ವಿಜಯತೋತ್ಸವವನ್ನು ಆಚರಿಸಬಹುದು. ಆದರೆ ನಮ್ಮ ಒಳಗಿನ ಶತ್ರುಗಳು ವಿಜ್ರಂಭಿಸುವಾಗ ಈ ವಿಜಯೋತ್ಸವ ಅರ್ಥವನ್ನು ಕಳೆದುಕೊಳ್ಳುತ್ತದೆ. ಎಲ್ಲರೂ ಒಗ್ಗಟ್ಟಾಗಿ ಒಂದೇ ಮಂತ್ರವನ್ನು ಪಠಿಸಿ ಸೋಲಾಗಲಿ ಗೆಲುವಾಗಲಿ ಒಂದೇ ಭಾವದಿಂದ ಸ್ವೀಕರಿಸಬೇಕಾದ ಅನಿವಾರ್ಯತೆಯಲ್ಲಿ ಹೀಗೆ ಒಳಗಿನ ಶತ್ರುಗಳ ಸೆರಗಿನ ಮರೆಯ ನಗುವಿಗೆ ಸಾಕ್ಷಿಯಾಗಬೇಕಾಗಿರುವುದು ದೊಡ್ಡ ದುರಂತ. ವಿಕಟ ವಿಡಂಬನೆ ಇದು. 

ಯುದ್ದ ಆರಂಭದಲ್ಲಿ ಶಾಂತಿ ಮಂತ್ರ ಜಪಿಸಿ ಮಹಾ ಶಾಂತಿದೂತರು ಎನಿಸಿಕೊಂಡವರು ಈಗ ಮರೆಯಲ್ಲಿ ನಿಂತು ಇದೇ ವಿಕಟ ಹಾಸವನ್ನು ಮರೆಯುತ್ತಿದ್ದಾರೆ. ನಿನ್ನೆ  ಪಾಕಿಸ್ಥಾನ ಕದನ ವಿರಾಮವನ್ನು ಬಯಸಿತ್ತು. ಮೊದಲಿಗೆ ಕರೆ ಬಂದದ್ದು ಅಲ್ಲಿನ ಸೇನಾನಿಯಿಂದ. ಹೊರತು ಅಮೇರಿಕದ ದೊಡ್ಡಣ್ಣನಿಂದ ಅಲ್ಲ. ಹಾಗಿದ್ದರೂ ಅಮೇರಿಕದ ದೊಡ್ಡಣ್ಣ ಎದುರು ವಿಶ್ವಗುರು ಎನಾದ ಹೀಗೆ ಚಿತ್ರವಿಚಿತ್ರ ವಿಮರ್ಶೆ ಮೆರೆದು ತಾವು ದೊಡ್ಡ ಪಂಡಿತರಂತೆ ಬಿಂಬಿಸುವ ಈ ಮನೋಭಾವ ನಮ್ಮದೇಶದ ಒಳಗಿನ ದೊಡ್ಡ ಶತ್ರು. ನಮ್ಮ ಅಣ್ಣತಮ್ಮದಿಂದಿರ ಜಗಳದಿಂದ ನಮ್ಮನ್ನು ರಕ್ಷಿಸುವುದಕ್ಕೆ ಯಾವ ಭೀಷ್ಮನೂ ಇಲ್ಲ ಎಂಬುದನ್ನು ಇವರು ಮರೆತಂತಿದೆ. ಯಾವುದೇ ಕ್ಷಣದಲ್ಲಿ ಬಂದು ಬೀಳಬಲ್ಲ ಮಿಸೈಲ್ ನ ನೆರಳಲ್ಲೇ ನಾವಿದ್ದೇ ವೆ ಎಂಬುದನ್ನು ಇವರು ಮರೆತಂತಿದೆ. ಇಲ್ಲದಿದ್ದರೆ ಈ ಶಿಖಂಡೀತನದ ಅಟ್ಟ ಹಾಸಕ್ಕೆ ಬೇರೆ ಎನು ಹೇಳುವುದಕ್ಕೆ ಸಾಧ್ಯ? ಒಂದು ವೇಳೆ ಈ ಕದನ ವಿರಾಮದ ಬೇಡಿಕೆಯನ್ನು ಮನ್ನಿಸದೇ ಇರುತ್ತಿದ್ದರೆ...ಆಗ ಎದುರಾಗುವ ವಿಮರ್ಶೆ ಬೇರೆ ರೀತಿಯದಾಗಿರುತ್ತಿತ್ತು. ಇಂತಹ ಕುತಂತ್ರಿಗಳಿಗೆ ವಿಮರ್ಶೆ ಬಿಟ್ಟು ಬೇರೆ ಎನೂ ಸಾಧ್ಯವಿಲ್ಲ. ತಮ್ಮ ಅಪ್ಪ ಅಮ್ಮ ಭಂಧು ಮಿತ್ರರು, ಬೆಚ್ಚಗಿನ ಮನೆ ಎಲ್ಲವನ್ನು ಬಿಟ್ಟು ಹೋರಾಡುವ ಆ ಸೈನಿಕರ ಪರಿಶ್ರಮವನ್ನು ಒಂದಿಷ್ಟೂ ಕಲ್ಪಿಸಿಕೊಳ್ಳದ ಈ ಒಳಗಿನ ಶತ್ರುಗಳು ಸದ್ಯದಲ್ಲಿ ಭಾರತದ ದೊಡ್ಡ ಶತ್ರುಗಳು. ಆ ಮನೋಭಾವಕ್ಕೆ ಹೇಸಿಗೆ ಅನಿಸುತ್ತದೆ. ಹಾಗಾಗಿ ಇವತ್ತು ಪ್ರೇಂಡ್ ಲಿಸ್ಟ್ ನಲ್ಲಿದ್ದ ಒಬ್ಬ ಹಿತ ಶತ್ರುವಿನ ಪೋಸ್ಟ್ ನೋಡಿ ಮೊದಲು ಬೆಳಗ್ಗೆ ಎದ್ದಕೂಡಲೆ ಆತನನ್ನು ಅನ್ ಫ್ರೆಂಡ್ ಮಾಡಿಬಿಟ್ಟೇ. ಅದಕ್ಕಿಂತ ಹೆಚ್ಚಿಗೆ ನಾನಾದರೂ ಏನು ಮಾಡಬಲ್ಲೆ? ಇಂತಹವರ ಪರಿಸರದಿಂದ ದೂರಾಗಿರುವುದೇ ಸೂಕ್ತ. 

ಕದನ ವಿರಾಮವನ್ನು ಬೇಡಿ ಕರೆದವರೇ ಅದನ್ನು ಉಲ್ಲಂಘಿಸಿ ಕೃತಘ್ನತೆ ಮೆರೆದರೆ ...ಅದಕ್ಕೆ ಕಾರಣ ಅವರ ಅಪ್ರಾಮಾಣಿಕತೆ. ಕದನ....ಕ ತೆಗೆದರೆ ದನ... ಅಂದರ ಪಶುವಿನ ಸೌಮ್ಯತೆ, ಪಶುವಿನ ತ್ಯಾಗ, ಪಶುವಿನ    ಮಾತೃ ಸಮಾನ ಅನುಗ್ರಹ ಇದರ ಮೌಲ್ಯವನ್ನು ತಿಳಿಯದವರು ಕದನ ಮಾಡಿ ಸದ್ಭಾವನೆಗೆ ಸವಾಲಾಗಿ...ಕೊನೆಗೆ ಅದರಲ್ಲೇ ವಿ - ರಾಮವನ್ನು ಬಯಸಿ ಒಂದು ತತ್ವಕ್ಕೆ ದ್ರೋಹ ಮಾಡುವವರ ವರ್ತನೆಯನ್ನು ಖಂಡಿಸುವುದರ ಹೊರತಾಗಿ ಮರೆಯಲ್ಲೆ ನಗುವುದು ನಿಜಕ್ಕೂ ದೊಡ್ಡ ದುರಂತ. ದನ ಮತ್ತು ರಾಮ ದನ ಪರಮ ಸಾಧ್ವೀ ರೂಪವಾದರೆ ....ರಾಮ ಧೀರೋತ್ತವ್ಯಕ್ತಿತ್ವದ ರೂಪ. ರಾಮನನ್ನೂ ಗೌರವಿಸದೇ ರಾಮ ಕಾರ್ಯವನ್ನು ತೆಗಳುವಾಗ ಹೀಗೆ ಕದನ ವಿರಾಮದ ಅರ್ಥಕ್ಕೆ ದ್ರೋಹ ಬಗೆದರೆ ಅದು ಅತಿಶಯವಲ್ಲ. ರಾಮ ರಾವಣನೊಂದಿಗಿನ ಹೋರಾಟದಲ್ಲಿ ಮಂಗಗಳ ಸಹಾಯವನ್ನು ಪಡೆದ ಎಂದು ಹೀಯಾಳಿಸುವವರಿದ್ದಾರೆ. ಸಾವಿರ ಸಾವಿರ ರಕ್ಕಸರನ್ನು ನಿಂತ ನಿಲುವಿಗೆ ಸಂಹರಿಸಿದ ರಾಮನಿಗೆ ದೂರದಲ್ಲಿರುವ ರಾವಣ ಲೆಕ್ಕವೇ ಅಲ್ಲ. ಅಯೋಧ್ಯೆಯಲ್ಲಿ ನಿಂತುಕೊಂಡೆ ಆತನನ್ನು ಸಂಹರಿಸುವ ಶಸ್ತ್ರಾಸ್ತ್ರಗಳು ರಾಮನ ಬಳಿ ಇತ್ತು. ಆದರೂ ರಾಮ ಯಾಕೆ ಲಂಕೆಯ ಬಳಿಗೆ ಬರಬೇಕಾಯಿತು? ಯಾಕೆ ಮಂಗಗಳ ಸಹಾಯ ಪಡೆಯಬೇಕಿತ್ತು? ಅವುಗಳೆಲ್ಲ ನಿಮಿತ್ತ. ಅದನ್ನು ವಿಮರ್ಶಿಸುವ ಅರ್ಹತೆಯಾಗಲಿ ತಿಳಿವಳಿಕೆಯಾಗಲೀ ಇಲ್ಲ. ಕದನ ವಿರಾಮದ ಧೂರ್ತ ನಾಟಕವನ್ನು ಆಡಿದ ಪಾಕಿಸ್ಥಾನವನ್ನು ವಿಮರ್ಶಿಸುವ ಯೋಗ್ಯತೆ ಇಲ್ಲದವರು.....ವಿಕೃತ ಮನೋಭಾವದಲ್ಲಿ ನಮ್ಮನ್ನು ವಿಮರ್ಶಿಸುತ್ತಾರೆ. ಇದ್ದಕ್ಕಿಂತ ದೊಡ್ಡ ಶತ್ರುಗಳು ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕಿಲ್ಲ. ಮೊದಲು ಇಂತಹ ಮನೋಭಾವ ಬದಲಾಗಬೇಕು. ಗಡಿಯಲ್ಲಿ ಹಾರಿದ ಒಂದು ಮಿಸೈಲಿನ ಒಂದು ತುಂಡು ಇವರ ತಲೆಯ ಮೇಲೆ ಬಿದ್ದರೆ ಭಾರತ ಒಂದಷ್ಟು ಸುರಕ್ಷಿತ. 

    
ಶಾಂತಿ ಮಂತ್ರವನ್ನು ಓದಿದದವರು...ಈಗ ಮರೆಯಲ್ಲಿ ನಗುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಇಂತಹ ಜಗಳವೇ ಹೊರತು ಶಾಂತಿಯಲ್ಲ.  ಅವರಿಗೆ ಪರಮ ಶಾಂತಿ ಸಿಗುವ ತನಕ ಈ ಕದನಕ್ಕೆ ವಿರಾಮವಿಲ್ಲ. 



            

Sunday, April 20, 2025

ಯಜ್ಞೋಪವೀತ ದರ್ಶನ

ಬಾಲ್ಯದಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿರಬೇಕಾದರೆ ಬ್ರಹ್ಮೋಪದೇಶವಾಯಿತು. ಅದು ವರೆಗೆ ನನಗೆ ಯಾವಾಗ ಉಪನಯನ ಅಂತ ಕೇಳುತ್ತಿದ್ದವನಿಗೆ ಒಂದು ದಿನ ಉಪನಯನವಾಯಿತು. ಬಡತನದಲ್ಲಿದ್ದವರಿಗೆ ಈ ಮದುವೆಯಾದರೂ ಸುಲಭದಲ್ಲಿ ಆಗಬಹುದು. ಅಲ್ಲಿ ಗಂಡು ಹೆಣ್ಣು ಮೆಚ್ಚಿದರೆ ಈ ಕಾಲದಲ್ಲಿ ಮದುವೆಯಾಗಿಬಿಡುತ್ತದೆ. ಆದರೆ ಉಪನಯನ ಎಂಬುದು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಕೇವಲ ಒಬ್ಬ ಪುಟ್ಟ ಬಾಲಕನಿಗೆ ಆಗುವ ಒಂದು ಪುಟ್ಟ ಕಾರ್ಯಕ್ರಮವಾದರೂ ಅದಕ್ಕೆ ಹಲವಾರು ನಿಬಂಧನೆಗಳು ಇರುತ್ತವೆ. ಯಾಕೆಂದರೆ ಬ್ರಹ್ಮೋಪದೇಶ ಆ ಮಗುವಿಗೆ ಸಿಗುವ ಶಿಕ್ಷಣಕ್ಕೆ ಅಂದೇ ನಾಂದಿ. ಯಾವುದೇ ವ್ಯಕ್ತಿಯಾದರು ಹುಟ್ಟಿದ ಕೂಡಲೇ ಮೊದಲು ಸಿಗುವ ವಸ್ತುವೆಂದರೆ ಶಿಕ್ಷಣ. ಬದುಕಿನ ಕ್ಷಣ ಕ್ಷಣವೂ ಸಿಗುವುದಕ್ಕೆ ಶಿಕ್ಷಣ ಅಂತ ಹೇಳಬಹುದು.  ಆಗ ತಾನೆ ಹುಟ್ಟಿದ ನವಜಾತ ಶಿಶುವಿಗೆ ಬಾಯಿಗೆ ತೊಟ್ಟು ಹಾಲು ಸಿಗಬೇಕಾದರೆ ಅತ್ತರೆ ಸಿಗುತ್ತದೆ ಎಂಬ ಜ್ಞಾನ ಒದಗಿ ಬರುವಲ್ಲಿಂದ ಶಿಕ್ಷಣ ತೊಡಗಿಬಿಡುತ್ತದೆ. ಆದರೆ ಬದುಕಿನಲ್ಲಿ ನಾನು ಯಾಕೆ ಹುಟ್ಟಿದೆ ಅಂತ ತಿಳಿಯುವ ಶಿಕ್ಷಣ ಒದಗಿ ಬರುವುದು ಉಪನಯನದಿಂದ. ಅದೊಂದು ಮರು ಜನ್ಮ. ಹಾಗಾಗಿ ಅದಕ್ಕೆ ಮೂಹೂರ್ತ ಸುಲಭದಲ್ಲಿ ಸಿಗುವುದಿಲ್ಲ. ಬೇಕಾದರೆ ಜ್ಯೋತಿಷಿಗಳಲ್ಲಿ ಒಂದು ಸಲ ವಿಚಾರಿಸಿ. ತಂದೆ ಮಗನ ಗ್ರಹ ಬಲ ಜತೆಗೆ ಒದಗಿಬರಬೇಕು. ಹಾಗಾಗಿ ಬಡತನದಲ್ಲಿ ಉಪಯನ ಆಗುತ್ತದೆ ಎಂದು ವಿಶ್ವಾಸ ಇಡುವ ಹಾಗಿಲ್ಲ. ಆದರೂ ದೈವಾನುಗ್ರಹದಿಂದ ಉಪನಯನ ಆಯಿತು.  ಹಿರಿಯರು ಸಂಧ್ಯಾವಂದನೆ ಮಾಡುವಾಗ ಮಂತ್ರ ಹೇಳುವಾಗ ಮಕ್ಕಳು ಕುತೂಹಲದಿಂದ ಆಶೆ ಗಣ್ಣಿನಿಂದ ನೋಡುತ್ತೇವೆ. ಯಾಕೆಂದರೆ ಉಪಯನಯನವಾಗದೇ ಮಂತ್ರ ಹೇಳುವುದಕ್ಕೆ ಅಧಿಕಾರವಿಲ್ಲ. ಮಗುವಿಗೆ ಮೊದಲು ಬ್ರಹ್ಮೋಪದೇಶವಾಗಿ ಗಾಯತ್ರಿ ಮಂತ್ರದ ಉಪದೇಶವಾಗಬೇಕು.  ಕಾಲ ಯಾವುದೆಂದು ಗೊತ್ತಿಲ್ಲ. ಆ ಕಾಲದಿಂದ ವಿಶ್ವಾಮಿತ್ರ ಋಷಿಯ ಕಂಡ ಮಂತ್ರ ಗಾಯತ್ರಿ ಮಂತ್ರ. ಅದು  ನಮ್ಮ ನಾಲಿಗೆಯಲ್ಲಿ ಕುಣಿಯಬೇಕಾದರೆ ಅದಕ್ಕೊಂದು ಇತಿಹಾಸವಿದೆ. ಇತಿಹಾಸಕ್ಕಿಂತಲೂ ಅದಕ್ಕೊಂದು ಸಂಪ್ರದಾಯವಿದೆ. ಪೂರ್ಣವಿರಾಮ ಇಲ್ಲದ ಒಂದು ಸಂಪ್ರದಾಯವದು. 

ಸಂಧ್ಯಾವಂದನೆ....ಹೇಳುವುದಕ್ಕೆ ಒಂದು ಆಕ್ಷೇಪ ಉಂಟು. ಹಿಂದುಗಳೂ ಮೂರ್ತಿ ಪೂಜಕರು. ಸಾವಿರಾರು ದೇವರು ಇದ್ದಾರೆ...ಹೀಗೆ ಅಪೂರ್ಣ ಜ್ಞಾನದ ಸಂಗತಿಗಳು. ನಿಜಕ್ಕಾದರೆ ಸಂಧ್ಯಾವಂದನೆಯಲ್ಲಿ ಯಾವುದೇ ಮೂರ್ತಿಯೂ ಇಲ್ಲ. ಯಾವುದೇ ಕ್ಷೇತ್ರವೂ ಇಲ್ಲ.  ಯಾವುದೇ ಪರಿಕರದ ಅಗತ್ಯವೂ ಇರುವುದಿಲ್ಲ. ಬ್ರಹ್ಮೋಪದೇಶದ ನಂತರ ಅದು ಅನಿವಾರ್ಯ ಕರ್ಮ. ಮೂರೆಳೆ ಜನಿವಾರದಿಂದ ಬಂಧಿತವಾಗುವ ಅನಿವಾರ್ಯ ಕರ್ಮ ಅದು ಅಂತ ಹಲವರಿಗೆ ತಿಳಿದಿಲ್ಲ. ಹೊರಗೆ ಎಲ್ಲೂ ಕಾಣಲಾಗದ ಭಾವ ರೂಪವಿಲ್ಲದ ಭಗವಂತನನ್ನು ಆ ಪರಮೇಶ್ವರನನ್ನು ತನ್ನಲ್ಲೇ ಕಾಣುವ ಒಂದು ಪವಿತ್ರ ಕರ್ಮ. ಪವಿತ್ರ ಎಂದರೆ ಅಲ್ಲಿ ಪರಿಶುದ್ಧಿ ಇರಬೇಕು. ಆದರೆ ಪರಿಶುದ್ದಿ ಪಾವಿತ್ರ್ಯ ಎಂದರೆ ಇಂದಿಗೂ ಅದು ನಿಗೂಢ ಸತ್ಯ. ಹಲವರಿಗೆ ಅದು ತಿಳಿದಿಲ್ಲ. 

ಯಾವುದೇ ಪೂಜೆ ಪುನಸ್ಕಾರ, ಕರ್ಮಗಳನ್ನು ಮಾಡುವಾಗ ಪದೇ ಪದೇ ಅಚಮನ ಮಾಡುತ್ತಾರೆ. ಯಾಕೆಂದರೆ ಎಲ್ಲ ಭವ ಬಂಧನದ ಕಲ್ಮಷಗಳನ್ನು ಒಂದಿಷ್ಟಾದರೂ ಕಳೆದುಕೊಳ್ಳುವ ಸಾಮಾನ್ಯ ಕ್ರಿಯೆ. ಅಚಮನ ಮಾಡಿ ಪ್ರಾಣಾಯಾಮ ಮಾಡುತ್ತೇವೆ. ಪ್ರಾಣಾಯಾಮ ಎಂದರೆ ಏನು?  ಅಧುನಿಕ ಯೋಗ ಶಿಕ್ಷಣ ಹೇಳುತ್ತದೆ. ಪೂರಕ ರೇಚಕ ಕುಂಭಕದಲ್ಲಿ ಉಸಿರಾಟದ ತಂತ್ರಗಾರಿಕೆ. ಆದರೆ ಇದಿಷ್ಟೇ ಅಲ್ಲ. ಸನಾತನ ಧರ್ಮ ತೋರಿಸಿಕೊಡುವ ಪರಮ ಸತ್ಯ ಬೇರೆ  ಇದೆ. ಯಾವುದೇ ಪಾರಾಮಾರ್ಥಿಕ ಅನುಭವವಾಗಬೇಕಾದರೆ ನಾವು ನಮ್ಮ ಪಂಚೇಂದ್ರಿಯಗಳ ಸಂವೇದನೆ, ಪ್ರಚೋದನೆಯಿಂದ ದೂರಾಗಬೇಕು. ಕಣ್ಣು ಕಾಣಬಾರದು, ಕಿವಿ ಮೂಗು ತಟಸ್ಥವಾಗಬೇಕು. ದೇಹದ ಅಂಗಾಂಗಳು ಸ್ಪರ್ಶಜ್ಞಾನವನ್ನು ಕಳೆಯಬೇಕು. ವಿಸರ್ಜನಾಂಗಗಳು ತನ್ನ ಚಟುವಟಿಕೆಯನ್ನು ಸ್ತಭ್ದ ಗೊಳಿಸಬೇಕು. ಅದೊಂದು ಸ್ಥಿತಪ್ರಜ್ಞ ಸ್ಥಿತಿ. ಅದನ್ನು ಸಾಧಿಸುವ ಪುಟ್ಟ ಕ್ರಿಯೆ ಪೂರಕ ರೇಚಕ ಕುಂಭಕದ ಒಂದು ಕ್ರಿಯೆ. ಕೇವಲ ಮೂಗು ಹಿಡಿದು ಗಾಯತ್ರೀ ಮಂತ್ರ ಸ್ಮರಣೆಯಲ್ಲಿ ಪ್ರಾಣಾಯಾಮವಾಗುವುದಿಲ್ಲ. ಸೂರ್ಯ ಭೇದನ ಕ್ರಿಯೆಯಿಂದ ತೊಡಗುವ ಪ್ರಾಣಾಯಾಮ,  ಕಣ್ಣನ್ನು ಮುಚ್ಚಿಸುತ್ತದೆ. ಉಸಿರಾಟವನ್ನು ಸ್ತಬ್ಧಗೊಳಿಸುತ್ತದೆ.   ನಮ್ಮ  ದೇಹದ ಸ್ಪರ್ಶವನ್ನು ನಿಯಂತ್ರಿಸುತ್ತದೆ. ಈ ಅದ್ಭುತ ಕ್ರಿಯೆ ಎಂದರೆ ಅದು ಪರಿಶುದ್ದಿಯ ಸಂಕೇತ. ತಾನು ಈ ಭವಬಂಧನಿಂದ ಕ್ಷಣ ಹೊತ್ತಾದರೂ ಬೇರಾಗಿ ಪವಿತ್ರ ನಾದೆ ಎಂದು ತಿಳಿಯುವ ಕ್ರಿಯೆ. ದೇಹ ಸ್ಪರ್ಶಜ್ಞಾನದಿಂದ ದೂರಾಗುವುದೆಂದರೆ ಬಾಹ್ಯ ಜಗತ್ತಿನ ಅಂದರೆ ಈ ಲೌಕಿಕ ಜಗತ್ತಿನ ಸ್ಪರ್ಶವನ್ನು ದೂರಾಗಿಸುವುದೆಂದು ಅರ್ಥ ,.ಅದನ್ನು ಅಸ್ಪೃಶ್ಯತೆ ಅಂತ ಕೆಟ್ಟದಾಗಿ ವ್ಯಾಖ್ಯಾನಿಸುತ್ತಾರೆ. ಸ್ಪರ್ಶ ಎಂಬುದು ಲೌಕಿಕ ಜಗತ್ತಿನ ಸೆಳೆತ. ಪಾರಾಮಾರ್ಥಿಕ ಚಿಂತನೆ ಎಂದರೆ ಈ ಸೆಳೆತದಿಂದ ದೂರಾಗುವುದು. ಆದರೆ ಮೂರ್ಖರಿಗೆ ಅದು ಅರ್ಥವಾಗುವುದಿಲ್ಲ. ಅವರಿಗೆ ಲೌಕಿಕ ಜಗತ್ತೇ ಶ್ರೇಷ್ಠ. ಪರಮಾತ್ಮನ ಸಾನ್ನಿಧ್ಯದ  ಮತ್ತದರ  ಪಾವಿತ್ರತೆ ತಿಳಿಯದ ಅಜ್ಞಾನದ ಮುಸುಕಿನೊಳಗೆ ಚಡಪಡಿಸುವವರು ಇವರು.  ಪರಿಶುದ್ಧಿಯ ಪರಿಪೂರ್ಣ ಪವಿತ್ರ ಅರ್ಥ ತಿಳಿದಿವರಿಗೆ ಮಾತ್ರ ಅಸ್ಪೃಶ್ಯತೆಯ ಅರಿವಾಗಬಹುದು. ಹಾಗಾಗಿ ಸಂಧ್ಯಾವಂದನೆಗೆ ಕೇವಲ ಸ್ನಾನ ಮಾಡಿ ಪರಿಶುದ್ದಿಯಾದರೆ ಸಾಲದು. ಪ್ರಾಣಾಯಾಮದಿಂದ ಅಂತರಂಗವೂ ಪರಿಶುದ್ಧಿಯಾಗಿ ಮನಸ್ಸು ದೇವರಲ್ಲಿ ಐಕ್ಯವಾಗಿ ತಾನೂ ಈಶ್ವರನೆಂಬ ಅದ್ವೈತ ಜ್ಞಾನ ಸಿದ್ಧಿಯಾಗಬೇಕು. ಆದರೆ ಪಾಮರರಿಗೆ ಇದನ್ನು ತಿಳಿಸಿ ಹೇಳುವ ವ್ಯವಧಾನ ಯಾರಿಗೂ ಇಲ್ಲ. ಕೇವಲ ಅಸ್ಪೃಶ್ಯತೆಯ ಜಪ. 

ಬದುಕಿನ ಪಾವಿತ್ರ್ಯತೆಯ ಅರಿವು ಮೂಡುವುದಕ್ಕೆ ಸಂಧ್ಯಾವಂದನೆ ತೊಡಗಿಕೊಳ್ಳುವುದೇ ಬ್ರಹ್ಮೋಪದೇಶದಿಂದ. ಬ್ರಹ್ಮ ಪರಬ್ರಹ್ಮದ ಅರಿವಿದ್ದವರಿಗೆ ಮಾತ್ರ ಅದರ ಸತ್ಯ ಅರಿವಾಗುತ್ತದೆ. ಹಾಗಾಗಿ ಬ್ರಹ್ಮೋಪದೇಶ ಅದು ಕೇವಲ ಜಾತಿಯಿಂದ ಬ್ರಾಹ್ಮಣರಿಗೆ ಮಾತ್ರ ಅನಿವಾರ್ಯವಲ್ಲ. ಮನುಷ್ಯನಾಗಿ ಹುಟ್ಟಿದವನಿಗೆ ಇಹ ಪರದ ಚಿಂತನೆ ಇರುವವನಿಗೆ ಅದು ಅನಿವಾರ್ಯ. ಇಲ್ಲಿ ಸಂಸ್ಕಾರ ವೆತ್ಯಾಸವಿರಬಹುದು. ಆದರೆ ಕ್ರಿಯೆಯಲ್ಲಿ ವೆತ್ಯಾಸ ವಿರುವುದಿಲ್ಲ. ವಿಪರ್ಯಾಸವೆಂದರೆ ಇದನ್ನು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿಸಿ ಪ್ರತ್ಯೇಕಿಸುತ್ತಾರೆ.  ಹಾಗಾಗಿ ಬಾಲ್ಯದಲ್ಲಿ ಉಪನಯನವಾಗುತ್ತದೆ. ಶಾಲೆಗೆ ಹೋಗುವುದರಿಂದ ಬಾಹ್ಯ ಪ್ರಪಂಚದ ವ್ಯವಹಾರ ತೊಡಗಿಬಿಡುತ್ತದೆ. ಅದುವರೆಗೆ ಹಾಗೇ ಬರುತ್ತಿದ್ದವನಿಗೆ ಕೆಲವೊಂದು ಶಿಸ್ತು ಕ್ರಮಗಳು ಒದಗಿಬರುತ್ತದೆ. ಎಲ್ಲದಕ್ಕೂ ಮೊದಲು ಎದೆಗೆ ಒತ್ತಿಕೊಂಡು ದೇಹವನ್ನು ಆವರಿಸಿ ಒಂದು ಯಜ್ಞೋಪವೀತದ ಬಂಧನವಿರುತ್ತದೆ. ನಮ್ಮ ಅಜ್ಜ ಹೇಳುತ್ತಿದ್ದರು, ಏನು ಮಾಡುವುದಿದ್ದರೂ ಒಂದು ಸಲ ಜನಿವಾರ ಮುಟ್ಟಿ ನೋಡು. ಅವರು ಹೇಳುತ್ತಿರಬೇಕಾದರೆ ಆಗ ಅದರ ಗಂಭೀರತೆ ಅರಿವಾಗಲಿಲ್ಲ. ಆದರೆ ಬದುಕು ಸವೆಸಿದಂತೆ ಈ ಜನಿವಾರ ಅದೆಂತಹ ಪರಮಾತ್ಮ ಸಾನ್ನಿಧ್ಯವನ್ನು ಒದಗಿಸುತ್ತದೆ ಎಂದರೆ ಅದನ್ನು ಧರಿಸಿ ಅದರ ಪಾವಿತ್ರ್ಯತೆಯನ್ನು ತಿಳಿವಾಗ ಅರಿವಾಗುತ್ತದೆ. ಇಲ್ಲಿ ಪಾವಿತ್ರ್ಯತೆಯನ್ನು ತಿಳಿವಾಗ ಎಂದು ಪದೇ ಪದೇ ಉಲ್ಲೇಖಿಸಬೇಕು. ಯಾಕೆಂದರೆ ಹಲವರಿಗೆ ಅದು ಕೇವಲ ಅಲಂಕಾರಿಕ ವಸ್ತುವಾಗುತ್ತದೆ. ಹಾಗಾಗಿ ಅವರು ಮನೆಯ ಮೊಳೆಗೆ ಜನಿವಾರವನ್ನು ನೇತು ಹಾಕಿ ಎಲ್ಲ ಕರ್ಮಗಳಿಂದಲೂ ಅಜ್ಞಾನ ಸ್ವಾತಂತ್ರ್ಯವನ್ನು  ಪಡೆಯುತ್ತಾರೆ !.

ಉಪನಯನವಾಗಿ ಹಣೆಗೆ ತಿಲಕ ನಾಮ ಇಟ್ಟು ಶಾಲೆಗೆ ಹೋದರೆ ಸಹಪಾಠಿಗಳಿಂದ ಲೇವಡಿ ಗೇಲಿ ಆರಂಭವಾಗಿಬಿಡುತ್ತದೆ. ಆಗಿನಿಂದಲೇ ಒಂದು ಅವಮಾನ ಎಂಬ ಭಾವನೆ ಮೊಳೆತರೂ ಅಂತರಂಗದ ಭಾವನೆ ದೃಢವಾಗಿರುತ್ತದೆ. ನಾವೇ ಹಲವು ಸಲ ಮನೆಯಿಂದ ಹೊರಡಬೇಕಿದ್ದರೆ ತಿಲಕ ನಾಮ ಎಲ್ಲವನ್ನು ಉಜ್ಜಿ ತೊಡೆದು ಹೊರಗೆ ಕಾಲಿಡುತ್ತಿದ್ದೆವು. ಹೊರಗಿನ ಪ್ರಪಂಚಕ್ಕೆ ನಾನು ಬ್ರಹ್ಮೋಪದೇಶ ಪಡೆದವನು ಎಂದು ತೋರಿಸಿಕೊಳ್ಳುವುದಕ್ಕೂ ಒಂದು ಹಿಂಜರಿಕೆ. ಬ್ರಹ್ಮೋಪದೇಶದಲ್ಲಿ ಯಾವುದೇ ಅನ್ಯಧರ್ಮವನ್ನು ಅನ್ಯ ಸಂಸ್ಕಾರವನ್ನು ಕೀಳಾಗಿ ಕಾಣು ಎಂದು ಹೇಳುವುದಿಲ್ಲ. ನಿನ್ನ ಧರ್ಮವನ್ನು ಒಪ್ಪಿಕೊಳ್ಳದವನ್ನು ಹಿಂಸಿಸು, ತುಚ್ಚವಾಗಿ ಕಾಣು ಎಂದು ಉಪದೇಶಿಸುವುದಿಲ್ಲ. ಕೇವಲ ನಿನ್ನ ಶ್ರೇಯೋಭಿವೃದ್ಧಿಗೆ ಇದನ್ನು ಅನುಸರಿಸು ಅಂತ ಉಪದೇಶಿಸುತ್ತಾರೆ. ಹಾಗಾಗಿ ಸಂಧ್ಯಾವಂದನೆ ತೊಡಗುವಾಗ ಮಮೋಪಾತ್ತ ದುರಿತಕ್ಷಯದ್ವಾರ ಅಂತ ಸಂಕಲ್ಪಿಸುತ್ತಾರೆ. ಮಮೋಪಾತ್ತ ದುರಿತದ ಕ್ಷಯ...ಅದು ಕೇವಲ ವೈಯಕ್ತಿಕ ನೆಲೆಗಟ್ಟಿಗೆ ಮಾತ್ರ ಸೀಮಿತ. ಇದೆಲ್ಲ ಹೊರಗಿನ ಜಗತ್ತಿಗೆ ಅರಿವಾಗುವುದಿಲ್ಲ. ಅರಿವಾಗಬೇಕಾದರೆ ಸರಿಯಾದ ಅಧ್ಯಯನ ಬೇಕು. ಇಂದು ವಿಮರ್ಶೆಗಳು ಪ್ರತಿಕ್ರಿಯೆಗಳು ಅಧ್ಯಯನ ವಿಲ್ಲದ ಮೂರ್ಖ ಪ್ರವಚನಗಳಾಗಿರುತ್ತವೆ. 

  ವಿದ್ಯಾರ್ಥಿ ಜೀವನದಲ್ಲೇ ಈ ಕೀಳರಿಮೆಯಿಂದ ಬೆಳೆಯುವಾಗ ಸಂವಿಧಾನ ಬದ್ಧವಾದ ಹಕ್ಕು ಸ್ವಾತಂತ್ರ್ಯದಿಂದ ನಾವು ವಂಚಿತರಾಗುತ್ತೇವೆ ಎಂಬ ಅರಿವಿರುವುದಿಲ್ಲ.  ಜನಿವಾರದ ಭಾರ ಭಾವನಾತ್ಮಕವಾಗಿ ಬ್ರಹ್ಮೋಪದೇಶ ಪಡೆದವನ ಮೇಲಿರುತ್ತದೆ. ಆದರೆನಾವು ಜನಿವಾರ ಹಾಕಿದರೆ ಅದರ ಭಾರ ಮತ್ತೊಬ್ಬರ ಹೆಗಲ ಮೇಲಿರುತ್ತದೆ. ವಿಚಿತ್ರ. ಮಂಗಳೂರಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಒಂದು ಘಟನೆ, ಅದರ ವಿವರ ಸರಿಯಾಗಿ ಜ್ಞಾಪಕವಿಲ್ಲ.  ಒಬ್ಬ ಬ್ರಾಹ್ಮಣ ಹುಡುಗ ಉಪನಯನದ ನಂತರ ಶಾಲೆಗೆ ಬರುತ್ತಾನೆ. ಉಳಿದ ಮಕ್ಕಳು ಆತನ ಜನಿವಾರ ಹಿಡಿದೆಳೆದು ತಮಾಷೆ ನೋಡುತ್ತಾರೆ.  ಹೀಗೆ ಮಾಡಿ ಎಲ್ಲರೂ ಪುಕ್ಕಟೆ ಮನರಂಜನೆ ಅನುಭವಿಸುತ್ತಾರೆ. ಹುಡುಗ ಮಾತ್ರ ಅವಮಾನದಿಂದ ಕುಗ್ಗಿಬಿಡುತ್ತಾನೆ. ಮರುದಿನ ಜನಿವಾರ ಕಾಣಂತೆ ಇಡುತ್ತಾನೋ ಇಲ್ಲ ಕಳಚಿ ಮನೆಯಲ್ಲಿ ಬಿಟ್ಟು ಬಂದನೋ ಗೊತ್ತಿಲ್ಲ. ಆನಂತರ ಇದು ನಡೆಯಲಿಲ್ಲ. ಅದೇ ರೀತಿ ಒಬ್ಬನ ಟೊಪ್ಪಿ ತೆಗೆದು ಆಟವಾಡುತ್ತಾರೆ. ಅದೊಂದು ಧರ್ಮ ಬೇರೆಯೇ ಉಂಟು ಅಂತ. ಅಗ ನನಗೆ ಅರಿವಿಲ್ಲ. ಮರುದಿನ ಆ ಹುಡುಗನ ಮನೆಯಿಂದ ವಿಚಾರಿಸುವುದಕ್ಕೆ ಕೆಲವು ಮಂದಿ ಬರುತ್ತಾರೆ. ವೆತ್ಯಾಸ ಇಷ್ಟೆ. ವಿಚಾರಿಸುವುದಕ್ಕೆ ಬಂದುದಕ್ಕೆ ಆಕ್ಷೇಪವಲ್ಲ. ಆದರೆ ಇಲ್ಲಿ ಇಂತಹ ಖಾಸಗಿ ವಿಚಾರಗಳು ನಗೆ ಪಾಟಲಿಗೆ ಈಡಾಗುವುದು ನಿಜಕ್ಕೂ ಬೇಸರ ತರಿಸುತ್ತದೆ.  ಹಲವರ ಜೀವನದಲ್ಲೂ ಇದೇ ಬಗೆಯ ಘಟನೆಗಳು ನಡೆದಿರುತ್ತವೆ. ಹೆಚ್ಚಿನವರು ಇದು ಸಾಮಾನ್ಯ ಅಂತ ಹೇಳದೇ ಉಳಿಯುತ್ತಾರೆ. ವಿಚಿತ್ರವೆಂದರೆ ಇದು ಗಂಭೀರ ಅಂತ ಅನ್ನಿಸುವಾಗ ...ಕಾಲ ಮಿಂಚಿ ಹೋಗಿರುತ್ತದೆ. ಸ್ವಾತಂತ್ರ್ಯ ಅಂದರೆ ಏನು ಅಂತ ಯೋಚಿಸುವಂತಾಗುತ್ತದೆ. ಕಾನೂನು ನಿಯಮಗಳು ಎಲ್ಲವೂ ಸಮಾನವಾಗಿರಬೇಕು. ಇಲ್ಲವಾದರೆ ಅದು ನಾಗರೀಕ ಜೀವನದಕ್ಕು  ಜನೋಪಯೋಗಿಯಾಗುವುದಕ್ಕೆ ಸಾಧ್ಯವಿಲ್ಲ. 

ನಾನು ಒಂದು ಸಲ ಒಬ್ಬ ಹಿರಿಯರಲ್ಲಿ ಹೇಳಿದೆ, ಎಲ್ಲರೂ ಸೇರಿ ಸಂಧ್ಯಾವಂದನೆಯ ಅಭಿಯಾನವನ್ನು ಮಾಡಬೇಕು. ಹಲವರು ಹಲವು ಕಾರಣಗಳಿಂದ ಇದರಿಂದ ವಿಮುಖರಾಗಿರುತ್ತಾರೆ. ಅಥವಾ ಪುನಃ ತೊಡಗಿಸುವುದಕ್ಕೆ ಏನೋ ಹಿಂಜರಿಕೆ. ಮಂತ್ರಗಳು ಕಲಿತಿರುವುದಿಲ್ಲ. ಇಂತಹವರಿಗೆ ಪ್ರೇರಕವಾಗುವಂತೆ ಒಂದು ಅಭಿಯಾನ ಮಾಡಿ ಇದರ ಶಿಕ್ಷಣವನ್ನು ಒದಗಿಸಬೇಕು. ಎಲ್ಲರಿಗೂ ಇದರ ಮಹತ್ವವನ್ನು ಗಂಭೀರತೆಯನ್ನು ತಿಳಿಸಬೇಕು. ವಿಪರ್ಯಾಸವೆಂದರೆ ಇದಕ್ಕೆ ಯಾರೂ ಸ್ಪಂದಿಸಲಿಲ್ಲ. ನಮಗೆ ಗೌರವ ಸಿಗಬೇಕು. ನಮ್ಮ ಚಿಂತನೆಗಳಿಗೆ ನಮ್ಮ ಭಾವನೆಗಳಿಗೆ ಮನ್ನಣೆ ಸಿಗಬೇಕು ಅಂತ ಪ್ರತಿಯೊಬ್ಬರೂ  ಆಶಿಸುತ್ತಾರೆ. ಅದಕ್ಕೆ ಪ್ರತಿಯಾಗಿ ನಮ್ಮ ನಡವಳಿಕೆಗಳೂ ಅದಕ್ಕೆ ಅನುಗುಣವಾಗಿರಬೇಕು. ನಮ್ಮ ಧಾರ್ಮಿಕ ವಿಚಾರಗಳಿ ಮೊದಲು ನಾವು ಗೌರವ ಕೊಡಬೇಕು. ಸಂಧ್ಯಾವಂದನೆ , ಅನುಷ್ಠಾನ ನಿಯಮಗಳನ್ನು ನಾವು ಮೊದಲು ಗೌರವದಿಂದ ಅನುಸರಿಸಬೇಕು. ಮತ್ತೊಬ್ಬರು ಅದನ್ನು ಭಯದಿಂದ ಗೌರವದಿಂದ ಕಾಣುವಂತೆ ನಮ್ಮ ವರ್ತನೆ ಇರಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಾವು ಇರುವಾಗ ಸಹಜವಾಗಿ ನಗೆ ಪಾಟಲಿಗೆ ನಾವು ಅಥವಾ ಇನ್ಯಾರೋ ಈಡಾಗಿ ಬಿಡುತ್ತಾರೆ. ಎಲ್ಲರಿಗೂ ಅವರವರ ಹಾದಿ ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ಒಬ್ಬರ ಸ್ವೇಚ್ಛಾಚಾರದಿಂದ ಅದರ ಗಂಭೀರತೆ ನಷ್ಟವಾಗಿ ಅದರ ಪರಿಣಾಮ ಇನ್ಯಾರದೋ ಮೇಲೆ ಆಗುವುದು ವಿಡಂಬನೆ. ಒಂದು ಮನೆಯಲ್ಲಿ ನಾನೇ ನೋಡಿದ್ದೇನೆ, ಜನಿವಾರ  ಗೋಡೆಗೆ ನೇತು ಹಾಕಿರುತ್ತದೆ. ಬೇಕಾಗುವಾಗ ಧರಿಸುವ ಉಡುಗೆಯಂತೆ. ಹೇಳಿಕೇಳಿ ಇದು ಯಜ್ಞೋಪವೀತ..ಅಂದರೆ ಉಪವಸ್ತ್ರ. ಅಕ್ಷರಶಃ ಇದು ವಿಪರೀತಾರ್ಥದಲ್ಲಿ ಬಳಕೆಯಾಗುತ್ತದೆ. ಇನ್ನು ಸಂಧ್ಯಾವಂದನೆ ಮಾಡುವಾಗಲಂತೂ ಮೊಬೈಲ್ ಹತ್ತಿರವೇ ಇರುತ್ತದೆ. ಇಲ್ಲ ಅದು ಕಾಟಾಚಾರಕ್ಕೆಂಬಂತೆ ಮಾಡುತ್ತಾರೆ. ಯಾರೊಂದಿಗೊ ಮಾತನಾಡುತ್ತಾ ಇನ್ನೇನೋ ಕೆಲಸ ಜತೆಯಲ್ಲಿ ಮಾಡುತ್ತಾ ಸಂಧ್ಯಾವಂದನೆ ಮಾಡುವುದರಲ್ಲಿ ಭಗವಂತನ ಮೇಲೆ ಗಮನ ಹೇಗೆ ಸಾಧ್ಯ. ಕೇವಲ ಒಂದು ಹತ್ತು ನಿಮಿಷ ಕೂಡಾ ಅದಕ್ಕೆ ಸಂಪೂರ್ಣವಾಗಿ ವಿನಿಯೋಗಿಸುವ ಮನಸ್ಸು ಇಲ್ಲವಾದರೆ ಅದನ್ನು ಆಚರಿಸಿ ಆ ದೇವರಿಗೆ ಸವಾಲೊಡ್ಡುವ ಅವಶ್ಯಕತೆ ಇದೆಯೇ ಅಂತ ಅನ್ನಿಸುತ್ತದೆ.  ಒಂದು ಕಾಲದಲ್ಲಿ ನಾನೂ ಇದನ್ನು ಅವಗಣನೆ ಮಾಡಿದ್ದೆ. ಆದರೆ ಜೀವನ ಶಿಕ್ಷಣ ಅನುಭವ ಎಂಬುದು ಪಾಠ ಕಲಿಸುವಾಗ ನಾವು ಏನೂ ಅಲ್ಲ ಎಂಬ ಶೂನ್ಯತೆಯ ಅರಿವಾಗುವಾಗ ಇವುಗಳ ಆದ್ಯತೆ ಅರಿವಾಗುತ್ತದೆ. 

ಈಗ ನಿಯಮಿತವಾಗಿ ಸಂಧ್ಯಾಕಾಲಾದಲ್ಲಿ ಈ ಸಂಧ್ಯಾವಂದನೆ ಮಾಡುತ್ತೇನೆ. ಅದು ಮನೆ ಬಿಟ್ಟು ಹೊರಗೆ ಹೋದಾಗಲೂ..ಆ ಸಮಯವನ್ನುಆದಷ್ಟು ಪ್ರಯತ್ನ ಪೂರ್ವಕ ಅದಕ್ಕೆ ವಿನಿಯೋಗ ಮಡುತ್ತೇನೆ. ಪ್ರಯಾಣದಲ್ಲಿ ಆ ಸಮಯ ಬಂದರೆ ಒಂದಷ್ಟು ಸುಮ್ಮನೆ ಕುಳಿತು ಧ್ಯಾನವನ್ನಾದರೂ ಮಾಡಿ ಬಿಡುತ್ತೇನೆ. ಹಲವು ಕಡೆ ಮದುವೆಯಂತಹ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಕಷ್ಟಪಟ್ಟು ಸಂಧ್ಯಾವಂದನೆಗೆ ಕುಳಿತು ಬಿಡುತ್ತೇನೆ. ವಿಚಿತ್ರವೆಂದರೆ ಅಲ್ಲೂ ಕೆಲವರು ಅದೂ ಬ್ರಾಹ್ಮಣರೂ ವಿಚಿತ್ರವಾಗಿ ನೋಡುತ್ತಾರೆ.  ತಾವು ಮಾಡಲಾಗದ ಹತಾಶೆಯೋ ಅಲ್ಲ ನನ್ನದು ಢಂಭಾಚಾರವಾಗಿ ಕಾಣುವುದೋ ಗೊತ್ತಿಲ್ಲ ಅಂತೂ ಹಲವು ಸಲ ನನಗೇ ಹೀಗೆ ಅಂತ ಅನ್ನಿಸಿದ್ದಿದೆ. ಎಲ್ಲರಂತೆ ನಾನೂ ಮಾಡದೇ ಇರಬಹುದಲ್ಲ ಅಂತ ಅನ್ನಿಸಿದರೂ ಸಮಯ ಬಂದಾಗ ಉಳಿದವರಿಗಾಗಿ ನನ್ನದನ್ನು ನಾನೇಕೆ ಕಳೆದುಕೊಳ್ಳಬೇಕು. ಅಷ್ಟಾಗಿ ಇದು ಯಾರಿಗೂ ತೊಂದರೆ ಕೊಡುವ ಕಾರ್ಯವಲ್ಲ.  


ಇನ್ನು ನಮ್ಮ ಧಾರ್ಮಿಕ ವಿಧಿ ವಿಧಾನಗಳು ದೇಶ ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನವಾಗಿರುತ್ತವೆ. ಹಿರಿಯರಿಂದ ಬಂದ ಸಂಸ್ಕಾರ ಯವುದಾದರೂ ಅದನ್ನು ಗೌರವದಿಂದ ಕಾಣುವ ಮನೋಭಾವ ನಮ್ಮಲ್ಲಿರಬೇಕು. ನಮ್ಮ ಬ್ರಾಹ್ಮಣರಲ್ಲೇ ತನ್ನದು ಮಾತ್ರ ಶ್ರೇಷ್ಠ ಎನ್ನುವ ಭಾವನೆ ಹಲವು ಕಡೆಯಲ್ಲಿ ಪ್ರಕಟವಾಗುತ್ತದೆ. ಒಂದು ಕಾರ್ಯಕ್ರಮದಲ್ಲಿ ಊಟಕ್ಕೆ ಕುಳಿತಾಗ ಅಲ್ಲಿ ದಕ್ಷಿಣ ಕನ್ನಡದವರು ನಾವಿಬ್ಬರೇ ಇದ್ದೆವು. ಹಸ್ತೋದಕ ತೆಗೆಯುವ ಕ್ರಮಕ್ಕೆ ಒಬ್ಬ ಪುರೋಹಿತರು ಕೊಂಕು ನುಡಿದರು. ಆಗ ನಾನು ತೀವೃವಾಗಿ ಸಮಾಧಾನದಿಂದ ಆಕ್ಷೇಪ  ವ್ಯಕ್ತಪಡಿಸಿದ್ದೆ. ವಿಧಿ ವಿಧಾನಗಳು ಹಿರಿಯರಿಂದ ಸಿಗುವ ಸಂಸ್ಕಾರಗಳು ವಿಭಿನ್ನವಾಗಿದ್ದರೂ ಅದು ತೆಗಳುವ ಸಾಧನವಲ್ಲ. ತನ್ನದು ಮಾತ್ರ ಶ್ರೇಷ್ಠ ಅಂತ ಯಾರು ತಿಳಿದಿರುತ್ತಾನೋ ಆತನಿಗೆ ಅಧ್ಯಯನಲ್ಲಿ ಅಧ್ಯಯನದ ಕೊರತೆ ಇರುತ್ತದೆ. ನಮ್ಮ ಹಿರಿಯರಿಂದ ಬಂದ ಸಂಸ್ಕಾರವನ್ನು ನಾವು ಅನುಸರಿಸಬೇಕು. ವಿಶ್ವಾಮಿತ್ರನ ಕಾಲದಿಂದ ಅದು ನಮ್ಮ ಪಿತೃಗಳ ತನಕ ಬಂದಿದೆ ಎಂದರೆ ಅದು ಸತ್ವಹೀನವಾಗುವುದಕ್ಕೆ ಸಾಧ್ಯವಿಲ್ಲ. ವೇದ ಅಂದರೆ ನಿಯಮ. ನಮ್ಮ ಬದುಕನ್ನು ರೂಪಿಸುವ ನಿಯಮ. ನಾವು ಹೀಗೆ ನಡೆಯಬೇಕು ಎಂದು ನಿರ್ದೇಶಿಸುವ ನಿಮಯಗಳು. ಇದರ ಅರ್ಥ ತಿಳಿಯದೇ ನಮ್ಮಲ್ಲೇ ನಾವು ಮತ್ತೊಬ್ಬರನ್ನು ಹೀನಾಯವಾಗಿ ಕಂಡರೆ ಉಳಿದವರಿಂದ ಗೌರವ ಸಿಗಬೇಕು ಎನ್ನುವ ಹಕ್ಕೇ ಉಳಿಯುವುದಿಲ್ಲ. ಜಾತಿ ಯಾವುದಾದರೇನು ಧರ್ಮ ಯಾವುದಾದರೇನು ಗಂಗೆ ಹರಿಯುವಲ್ಲೇ ಯಮುನೆಯೂ ಹರಿಯುತ್ತಾಳೆ.  ಪ್ರಕೃತಿ ತೋರಿಸುವ ಪಾಠವಿದು. 


ಯಾವುದೋ ಹುಡುಗನ ಜನಿವಾರ ಕಿತ್ತೆಸೆದಿದ್ದಾರೆ. ನಾವು ಅದರ ಬಗ್ಗೆ ಪ್ರತಿಭಟಿಸುತ್ತೇವೆ. ನಿಜಕ್ಕೂ ಇದೊಂದು ವಿಷಾದನೀಯ ಘಟನೆ. ಇಲ್ಲಿ ಏನಾದರೂ ಯಾರೂ ರಸ್ತೆಗೆ ನುಗ್ಗುವುದಿಲ್ಲ. ಕಲ್ಲು ಎಸೆಯುವುದಿಲ್ಲ. ವಾಹನ ಉರಿಸುವುದಿಲ್ಲ. ಹಾಗಾಗಿ ಇಂತಹ ಘಟನೆಗಳು ಲೋಕ ಮುಖದಲ್ಲಿ ಗಂಭೀರವಾಗುವುದಿಲ್ಲ. ಬದಲಾಗಿ ಅಪಸ್ವರವೇ ಮೂಡುತ್ತದೆ. ಈ ಪವಿತ್ರತೆ, ಪರಿಶುದ್ದಿ ಮೋಕ್ಷ ಇದೆಲ್ಲ ಚಲಾವಣೆಯಾಗದ ವಿಷಯಗಳು. ಸ್ವತಹ ನಮಗೇ ಅದರ ಅರ್ಥ ತಿಳಿಯದೇ ಇದ್ದರೆ ಆಗುವ ಅವಗಣನೆಗೆ ಪರೋಕ್ಷವಾಗಿ ನಾವೇ ಕಾರಣೀಭೂತರಾಗಿಬಿಡುತ್ತೇವೆ. ಹಲವು ಸಲ ಸಾರ್ವಜನಿಕವಾಗಿ ನಾನು ಬ್ರಾಹ್ಮಣ ಎಂದ ಕೂಡಲೆ ಹಲವರ ವಕ್ರ ನೋಟದ ಅನುಭವ ನನಗೂ ಆಗಿದೆ. ಬ್ರಹ್ಮ ಎಂಬುದು ಎಂದಿಗೂ ಸಣ್ಣದಾಗುವ ವಸ್ತುವಲ್ಲ. ಹಾಗಾಗಿ ಅದನ್ನು ಪಾಲಿಸುವವನು ಎಂದಿಗೂ ಸಣ್ಣದಾಗುವುದಿಲ್ಲ. ಲೋಕ ಕಾಣಬಹುದು, ಆದರೆ ಎಲ್ಲರೂ ನಂಬುವ ಭಗವಂತನಿಗೆ ಅರಿವಿಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ. ಈ ವಿಶ್ವಾಸದಲ್ಲೇ ನಮ್ಮ ನಡೆ ಇರಬೇಕು.